ಪಟ್ನಾ: ‘ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರಿಂದ ಡಾ ಬಿ.ಆರ್ ಅಂಬೇಡ್ಕರ್ ಅವರಿಗೆ ಅವಮಾನವಾಗಿದೆ. ಇದು ದಲಿತರ ಮೇಲೆ ಅವರು ಹೊಂದಿರುವ ಅಗೌರವವನ್ನು ತೋರಿಸುತ್ತದೆ’ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಆರೋಪಿಸಿದ್ದಾರೆ.
ಮುಂಬರುವ ಬಿಹಾರ ವಿಧಾನಸಭೆ ಚುನಾವಣೆಗೆ ಪಕ್ಷದ ತಯಾರಿಗಾಗಿ ಪಟ್ನಾದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ರಾಜನಾಥ್ ಮಾತನಾಡಿದರು.
‘ಲಾಲು ಪ್ರಸಾದ್ ಅವರ ಕಾಲಿನ ಬಳಿ ಅಂಬೇಡ್ಕರ್ ಅವರ ಭಾವಚಿತ್ರವನ್ನು ಇರಿಸಲಾಗಿತ್ತು. ಇದು ಸಣ್ಣ ಪ್ರಮಾದವಲ್ಲ. ಸರ್ವಾಧಿಕಾರಿ ಧೋರಣೆ ಹೊಂದಿರುವ ಈ ಜನರು ಸಾಮಾಜಿಕ ಸಮಾನತೆಯ ಮುಖವಾಡ ಧರಿಸಿ ಬಿಹಾರವನ್ನು ವಂಚಿಸುತ್ತಾ ಬಂದಿದ್ದಾರೆ’ ಎಂದು ಆರೋಪಿಸಿದರು.
ಲಾಲು ಅವರ ಹುಟ್ಟುಹಬ್ಬದಂದು ನೂರಾರು ಜನರು ಅವರ ಮನೆಗೆ ಬಂದು ಶುಭಾಷಯ ಕೋರುತ್ತಿದ್ದ ವಿಡಿಯೊ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಕುರ್ಚಿ ಮೇಲೆ ಕುಳಿತಿದ್ದ ಲಾಲು ಅವರ ಕಾಲಿನ ಬಳಿ ಅಂಬೇಡ್ಕರ್ ಅವರ ಭಾವಚಿತ್ರವನ್ನು ಇರಿಸಿದ್ದು ವಿಡಿಯೊದಲ್ಲಿ ಕಂಡು ಬಂದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.