ADVERTISEMENT

ತ್ರಿವಳಿ ತಲಾಖ್ ವಿರುದ್ಧದ ಕಾನೂನು ಸಾವಿರಾರು ಕುಟುಂಬಗಳನ್ನು ರಕ್ಷಿಸಿದೆ: ಮೋದಿ

ಪಿಟಿಐ
Published 14 ಫೆಬ್ರುವರಿ 2022, 13:46 IST
Last Updated 14 ಫೆಬ್ರುವರಿ 2022, 13:46 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ಅಕ್ಬರ್‌ಪುರ್‌(ಉತ್ತರ ಪ್ರದೇಶ): ತ್ರಿವಳಿ ತಲಾಖ್ ವಿರುದ್ಧದ ಕಾನೂನು ಸಾವಿರಾರು ಹೆಣ್ಣು ಮಕ್ಕಳು ಬೇರ್ಪಡುವುದರಿಂದ ರಕ್ಷಣೆ ಒದಗಿಸಿದೆ. ಅವರ ಕುಟುಂಬಗಳನ್ನು ರಕ್ಷಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕಾನ್ಪುರ್ ದೆಹಟ್‌ನಲ್ಲಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಕಾನೂನು ಮತ್ತು ಸುವ್ಯವಸ್ಥೆ ಬಲಪಡಿಸಿದ್ದರಿಂದಾಗಿ ಶಾಲೆಗಳಿಗೆ ಹೋಗುವ ಹೆಣ್ಣುಮಕ್ಕಳಿಗೆ ದುಷ್ಕರ್ಮಿಗಳ ಕಾಟದಿಂದ ಮುಕ್ತಿ ಸಿಕ್ಕಿದೆ ಎಂದು ಹೇಳಿದರು.

ಉತ್ತರ ಪ್ರದೇಶದ ವಿಧಾನಸಭೆಗೆ ಎರಡನೇ ಹಂತದ ಚುನಾವಣೆಯ ಮತದಾನ ನಡೆಯುತ್ತಿದ್ದು, ಕಾನ್ಪುರ್ ದೆಹಟ್‌ನಲ್ಲಿ ಮೂರನೇ ಹಂತದಲ್ಲಿ ಚುನಾವಣೆ ನಡೆಯಲಿದೆ.

ADVERTISEMENT

ಇದೇವೇಳೆ, ಅಖಿಲೇಶ್ ಯಾದವ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ತಮ್ಮ ಆಡಳಿತಾವಧಿಯಲ್ಲಿ ರಾಜ್ಯವನ್ನು ಲೂಟಿ ಮಾಡಲು ರಾಜ್ಯದಾದ್ಯಂತ ತಮ್ಮ ಸಂಬಂಧಿಕರನ್ನು ನೇಮಕ ಮಾಡಿದ್ದರು ಎಂದಿದ್ದಾರೆ.

ತ್ರಿವಳಿ ತಲಾಖ್ ವಿರುದ್ಧದ ಕಾನೂನನನ್ನು ಸಮರ್ಥಿಸಿಕೊಂಡ ಅವರು, ಈ ಸಂಪ್ರದಾಯದಿಂದ ಮುಸ್ಲಿಂ ಹೆಣ್ಣುಮಕ್ಕಳು ಸಂಕಷ್ಟಕ್ಕೆ ಈಡಾಗಿದ್ದರು ಎಂದು ಹೇಳಿದರು.

‘ದಿಢೀರನೆ ನೀಡಲಾಗುತ್ತಿದ್ದ ತಲಾಖ್‌ನಿಂದಾಗಿ ಮಹಿಳೆ ಬರಿಗೈಯಲ್ಲಿ ತವರಿಗೆ ಮರಳುತ್ತಿದ್ದರು. ಮದುವೆ ವೇಳೆ ನೀಡಿದ ಮೋಟಾರ್ ಸೈಕಲ್, ಚಿನ್ನದ ಸರ ಯಾವುದನ್ನೂ ವಾಪಸ್ ಕೊಡುತ್ತಿರಲಿಲ್ಲ. ಇದರಿಂದಾಗಿ ತಲಾಖ್ ಪಡೆದ ಮಹಿಳೆಯ ಜೀವನ ಅಕ್ಷರಶಃ ನಾಶವಾಗುತ್ತಿತ್ತು’ಎಂದು ಮೋದಿ ಹೇಳಿದ್ಧಾರೆ.

'ಆ ಮಹಿಳೆಯಷ್ಟೇ ಅಲ್ಲ, ಅವರ ಪೋಷಕರು ಇದರಿಂದ ನೋವಿಗೆ ಒಳಗಾಗುತ್ತಿದ್ದರು. ತಮ್ಮ ಮಗಳು ಮನೆಗೆ ಬಂದರೆ ತಲಾಖ್ ಭಯ ಪೋಷಕರನ್ನೂ ಕಾಡುತ್ತಿತ್ತು. ಈಗ ನಾವು ಎಲ್ಲ ಮುಸ್ಲಿಂ ಸಹೋದರಿಯರಿಗೆ ತಲಾಖ್‌ನಿಂದ ಕಾನೂನಿನ ರಕ್ಷಣೆ ಒದಗಿಸಿದ್ದೇವೆ’ ಎಂದು ಹೇಳಿದರು.

ವರದಿಗಳ ಪ್ರಕಾರ, ತ್ರಿವಳಿ ತಲಾಖ್ ಕಾನೂನು ಜಾರಿಯಾದ ಬಳಿಕ ಉತ್ತರ ಪ್ರದೇಶದ ಸಾವಿರಾರು ಹೆಣ್ಣುಮಕ್ಕಳ ಕುಟುಂಬಕ್ಕೆ ರಕ್ಷಣೆ ಸಿಕ್ಕಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.