ಕೋಲ್ಕತ್ತ: ಇಲ್ಲಿನ ಕಾನೂನು ಕಾಲೇಜು ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗ (ಎನ್ಸಿಡಬ್ಲ್ಯೂ) ಶುಕ್ರವಾರ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದು, ಮೂರು ದಿನಗಳಲ್ಲಿ ವಿವರವಾದ ವರದಿ ಸಲ್ಲಿಸುವಂತೆ ಪೊಲೀಸರಿಗೆ ಸೂಚಿಸಿದೆ.
ಎನ್ಸಿಡಬ್ಲ್ಯೂ ಅಧ್ಯಕ್ಷೆ ವಿಜಯಾ ರಹತ್ಕರ್ ಕೋಲ್ಕತ್ತ ಪೊಲೀಸ್ ಆಯುಕ್ತ ಮನೋಜ್ ವರ್ಮಾ ಅವರಿಗೆ ಇಂದು (ಶುಕ್ರವಾರ) ಪತ್ರ ಬರೆದಿದ್ದು, ತಕ್ಷಣ ಮತ್ತು ತ್ವರಿತವಾಗಿ ತನಿಖೆ ನಡೆಸುವಂತೆ ನಿರ್ದೇಶಿಸಿದ್ದಾರೆ.
ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆಯೇ?, ಸಂತ್ರಸ್ತೆಗೆ ಸಂಪೂರ್ಣ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆಯೇ?, ಆಕೆಗೆ ಮಾನಸಿಕ ಮತ್ತು ಕಾನೂನು ನೆರವು ನೀಡಲಾಗಿದೆಯೇ ಎಂಬುವುದನ್ನು ಖಚಿತಪಡಿಸಿಕೊಳ್ಳುವಂತೆ ವರ್ಮಾಗೆ ರಹತ್ಕರ್ ನಿರ್ದೇಶನ ನೀಡಿದ್ದಾರೆ .
ಬಿಎನ್ಎಸ್ಎಸ್ ಸೆಕ್ಷನ್ 396ರ ಅಡಿಯಲ್ಲಿ ಸಂತ್ರಸ್ತರಿಗೆ ಸರಿಯಾದ ಮತ್ತು ತ್ವರಿತ ನ್ಯಾಯ ಸಿಗುವಂತೆ ನೋಡಿಕೊಳ್ಳಬೇಕು ಎಂದು ಕೋಲ್ಕತ್ತ ಪೊಲೀಸ್ ಕಮಿಷನರ್ ವರ್ಮಾಗೆ ರಹತ್ಕರ್ ಸೂಚಿಸಿದ್ದಾರೆ.
ಜೂನ್ 25 ರಂದು ದಕ್ಷಿಣ ಕೋಲ್ಕತ್ತದ ಕಾನೂನು ಕಾಲೇಜು ಕಸ್ಬಾ ಕ್ಯಾಂಪಸ್ನಲ್ಲಿ ಈ ಘಟನೆ ನಡೆದಿದೆ. ಬಂಧಿತ ಮೂವರಲ್ಲಿ ಇಬ್ಬರು ಅದೇ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಒಬ್ಬ ಹಳೆಯ ವಿದ್ಯಾರ್ಥಿ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.