ADVERTISEMENT

ಬಿ.ಎಚ್‌.ಲೋಯ ಸಾವು ಪ್ರಕರಣಕ್ಕೆ ಮಹತ್ವದ ತಿರುವು: ವಿಷ ಪ್ರಾಶನದಿಂದ ಸಾವು?

ವಕೀಲ ಸತೀಶ್ ಮಹಾದೇವ ರಾವ್ ಉಕೆಯಿಂದ ಬಾಂಬೆ ಹೈಕೋರ್ಟ್‌ಗೆ ಕ್ರಿಮಿನಲ್ ರಿಟ್

ಏಜೆನ್ಸೀಸ್
Published 22 ನವೆಂಬರ್ 2018, 4:51 IST
Last Updated 22 ನವೆಂಬರ್ 2018, 4:51 IST
ಸಿಬಿಐ ವಿಶೇಷ ನ್ಯಾಯಾಧೀಶ ಬಿ.ಎಚ್‌.ಲೋಯ
ಸಿಬಿಐ ವಿಶೇಷ ನ್ಯಾಯಾಧೀಶ ಬಿ.ಎಚ್‌.ಲೋಯ   

ಮುಂಬೈ:ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಆರೋಪಿಯಾಗಿದ್ದಸೊಹ್ರಾಬುದ್ದೀನ್‌ ಎನ್‌ಕೌಂಟರ್ ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಬಿಐ ವಿಶೇಷ ನ್ಯಾಯಾಧೀಶ ಬಿ.ಎಚ್‌.ಲೋಯ (ಬ್ರಿಜ್‌ಗೋಪಾಲ್ ಹರ್‌ಕಿಶನ್ ಲೋಯ) ಶಂಕಾಸ್ಪದ ಸಾವಿನ ಪ್ರಕರಣವೀಗ ಮತ್ತೆ ತಿರುವು ಪಡೆದುಕೊಂಡಿದೆ.

ಲೋಯ ಅವರು ವಿಷ ಪ್ರಾಶನದಿಂದ ಮೃತಪಟ್ಟಿದ್ದಾರೆ ಎಂದು ವಕೀಲಸತೀಶ್ ಮಹಾದೇವ ರಾವ್ ಉಕೆ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠಕ್ಕೆ ಕ್ರಿಮಿನಲ್ ರಿಟ್ ಅರ್ಜಿ ಸಲ್ಲಿಸಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ವಿಕಿರಣಶೀಲ ಐಸೋಟೋಪ್ ವಿಷ ಪ್ರಾಶನದಿಂದ ಲೋಯ ಮೃತಪಟ್ಟಿದ್ದಾರೆ ಎಂದು ಉಕೆ ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

‘ನಾನು ನಾಳೆ ಜೀವಂತ ಇರುತ್ತೇನೋ ಎಂಬುದು ಗೊತ್ತಿಲ್ಲ. ಲೋಯ ಸಾವಿಗೆ ಸಂಬಂಧಿಸಿದ ದಾಖಲೆಗಳನ್ನು ನಾಶ ಮಾಡಲಾಗಿದೆ. ಆದರೂ ಇತರ ಕೆಲವು ಇಲಾಖೆಗಳಿಂದ ದಾಖಲೆಗಳನ್ನು ಮರುವಶಪಡಿಸಿಕೊಂಡಿದ್ದೇವೆ. ಅದನ್ನು ರಿಟ್ ಅರ್ಜಿಯ ಜೊತೆಗೆ ಸಲ್ಲಿಕೆ ಮಾಡಲಾಗಿದೆ. ದಾಖಲೆಗಳನ್ನು ಸಂರಕ್ಷಿಸಿಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡುತ್ತಿದ್ದೇನೆ. ಒಂದು ವೇಳೆ ನಾನು ಮೃತಪಟ್ಟರೂ ದಾಖಲೆಗಳು ಸುರಕ್ಷಿತವಾಗಿದ್ದರೆ ತನಿಖೆ ನಡೆಸಲು ಸಾಧ್ಯವಾಗಬಹುದು’ ಎಂದು ನಾಗ್ಪುರ ಮೂಲದವರಾದ ಉಕೆ ಹೇಳಿದ್ದಾರೆ.

‘ಲೋಯ ಸಾವಿಗೆ ಸಂಬಂಧಿಸಿ ಇನ್ನಷ್ಟು ಸಾಕ್ಷ್ಯಗಳು ನಮ್ಮ ಬಳಿ ಇವೆ. ಅದನ್ನು ಹೈಕೋರ್ಟ್‌ಗೆ ಸಲ್ಲಿಸಲಿದ್ದೇವೆ’ ಎಂದೂ ಅವರು ತಿಳಿಸಿದ್ದಾರೆ.

2015ರಲ್ಲಿ ಅಮಿತ್ ಶಾ ಅವರು ನಾಗ್ಪುರಕ್ಕೆ ಮೂರು ದಿನಗಳ ಭೇಟಿ ನೀಡಿದ್ದ ವೇಳೆ ಅಣು ಇಂಧನ ಆಯೋಗದ ಅಧ್ಯಕ್ಷ ರತನ್ ಕುಮಾರ್ ಸಿನ್ಹಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನಾಶಪಡಿಸಲಾಗಿದೆ ಎಂದು ಲೈವ್‌ ಲಾ ಸುದ್ದಿತಾಣಕ್ಕೆ ಉಕೆ ತಿಳಿಸಿದ್ದಾರೆ.

ಅಮಿತ್ ಶಾ ಮತ್ತು ರತನ್ ಕುಮಾರ್ ಸಿನ್ಹಾ ಭೇಟಿಯು ಲೋಯ ಅವರಿಗೆ ವಿಷ ಪ್ರಾಶನ ಮಾಡಿಸಿದ್ದರ ಸುಳಿವು ನೀಡುತ್ತದೆ ಎಂದು ಉಕೆ ಪ್ರತಿಪಾದಿಸಿದ್ದಾರೆ.

‘ಲೋಯ ಅವರು ನನ್ನ ಬಳಿ ಮಾತನಾಡಲು ಇಚ್ಛಿಸಿರುವುದಾಗಿ ಅವರ ಸಹೋದ್ಯೋಗಿಗಳಾದ ಖಂಡಲ್ಕರ್ ಮತ್ತು ಥೋಂಬ್ರೆ ನನ್ನ ಬಳಿ ಹೇಳಿದ್ದರು. ನಂತರ ವಿಡಿಯೊ ಕಾಲ್ ಮೂಲಕ ಅವರ ಬಳಿ ಮಾತನಾಡಿದ್ದೆ.ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಸೊಹ್ರಾಬುದ್ದೀನ್‌ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿ ಲೋಯಾ ಅವರಿಗೆ ಬೆದರಿಕೆಹಾಕಿದ್ದರು’ ಎಂದೂ ಉಕೆ ತಿಳಿಸಿದ್ದಾರೆ.

ಸೊಹ್ರಾಬುದ್ದೀನ್‌ ಪ್ರಕರಣದಲ್ಲಿ ಅಮಿತ್ ಶಾ ಅವರನ್ನು ಮುಖ್ಯ ಆರೋಪಿ ಸ್ಥಾನದಿಂದ ಬಿಡುಗಡೆಗೊಳಿಸುವುದಕ್ಕೆ ಸಂಬಂಧಿಸಿ ಸಿದ್ಧಪಡಿಸಲಾಗಿದ್ದ ‘ಕರಡು ಆದೇಶ’ವನ್ನು ಖಂಡಲ್ಕರ್ ಜತೆ ಲೋಯ ಹಂಚಿಕೊಂಡಿದ್ದರು ಎಂದೂ ಉಕೆ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಖಂಡಲ್ಕರ್ ಮತ್ತುಥೋಂಬ್ರೆ ಸಹ ನಿಗೂಢವಾಗಿ ಮೃತಪಟ್ಟಿದ್ದರು.

ಲೋಯ ಸಾವು ಪ್ರಕರಣ ದೇಶದಾದ್ಯಂತ ತೀವ್ರ ಸಂಚಲನ ಮೂಡಿಸಿತ್ತು. ರಾಜಕೀಯವಾಗಿಯೂ ಕೋಲಾಹಲ ಸೃಷ್ಟಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿ ಏಪ್ರಿಲ್ 20ರಂದು ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್‌,ಸಹಜ ಕಾರಣದಿಂದಾಗಿ ಲೋಯ ಸಾವು ಸಂಬಂಧಿಸಿದೆ ಎಂದು ಹೇಳಿತ್ತು. ಅಲ್ಲದೆ, ಸಾವಿನ ಕುರಿತು ಸ್ವತಂತ್ರ ತನಿಖೆಗೆ ಒತ್ತಾಯಿಸಿ ಸಲ್ಲಿಸಲಾದ ಎಲ್ಲ ಅರ್ಜಿಗಳನ್ನು ವಜಾಗೊಳಿಸಿತ್ತು.

ಸಿಬಿಐ ವಿಶೇಷ ನ್ಯಾಯಾಧೀಶರಾಗಿದ್ದಲೋಯ 2014ರಲ್ಲಿ ನಾಗಪುರದಲ್ಲಿ ನಿಗೂಢವಾಗಿ ಮೃತಪಟ್ಟಿದ್ದರು.

ಸಂಬಂಧಿತ ಸುದ್ದಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.