ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜೀವನಾಧಾರಿತ ಚಿತ್ರ ಲೋಕಸಭಾ ಚುನಾವಣೆಯ ’ಪ್ರಚಾರ ಸರಕು‘ ಆಗಿದ್ದು, ಬಿಡುಗಡೆಗೆ ತಡೆ ಒಡ್ಡಬೇಕು ಎಂದು ಸಿಪಿಐ ಹಾಗೂ ಸಿಪಿಐ(ಎಂ) ನೇತೃತ್ವದ ನಿಯೋಗವು ಮಂಗಳವಾರ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
’ಸಿನಿಮಾ ಬಿಡುಗಡೆಯಾದರೆ, ತ್ರಿಪುರಾ ಮತ್ತು ಪಶ್ಚಿಮ ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗಲಿದೆ‘ ಎಂದುಸಿಪಿಐನ ಡಿ.ರಾಜಾ ಹಾಗೂ ಸಿಪಿಐ(ಎಂ)ನ ಪಾಲಿಟ್ಬ್ಯುರೊ ಸದಸ್ಯ ನಿಲೋತ್ಪಲ್ ಬಸು ಅವರು ಆಯೋಗದ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು.
’ಮೋದಿ ಅವರ ಜೀವನಾಧಾರಿತ ಚಿತ್ರದ ಕುರಿತಾಗಿ ಆಯೋಗದ ಜೊತೆ ವಿಸ್ತೃತ ಮಾತುಕತೆ ನಡೆಸಿದ್ದೇವೆ. ’ಪ್ರಚಾರ ಸರಕು‘ ಸಿನಿಮಾಗಳನ್ನು ಚುನಾವಣೆ ಮುಗಿಯುವ ತನಕ ತಡೆಹಿಡಿಯಬೇಕು. ಈ ವಿಚಾರದಲ್ಲಿ ಆಯೋಗವು ನಿಷ್ಪಕ್ಷಪಾತ ನಿರ್ಧಾರ ತೆಗೆದುಕೊಳ್ಳಲಿದೆ‘ ಎಂದು ಎರಡು ಪಕ್ಷಗಳು ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ.
ಆಯೋಗ ನೋಟಿಸ್: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಮೋದಿ ಜೀವನಾಧಾರಿತ ನಿರ್ಮಿಸಿರುವ ಚಿತ್ರತಂಡಕ್ಕೆ ದೆಹಲಿ ಚುನಾವಣಾ ಆಯೋಗ ನೋಟಿಸ್ ಜಾರಿಮಾಡಿದೆ.
’ರಾಜಕೀಯ ಪಕ್ಷ ಮತ್ತು ವ್ಯಕ್ತಿಗಳಿಗೆ ಸೇರಿದ ಜಾಹೀರಾತುಗಳನ್ನು ಪ್ರಕಟಿಸುವುದು ನೀತಿ ಸಂಹಿತೆಗೆ ವಿರುದ್ಧವಾದುದು. ಈ ಕಾರಣದಿಂದ ಮ್ಯೂಸಿಕ್ ಕಂಪನಿ ಮತ್ತು ಪ್ರೊಡಕ್ಷನ್ ಹೌಸ್ಗೆ ನೋಟಿಸ್ ನೀಡಲಾಗಿದೆ. ಮಾರ್ಚ್ 30ರ ಒಳಗಾಗಿ ನೋಟಿಸ್ಗೆ ಉತ್ತರಿಸುವಂತೆ ಸೂಚಿಸಲಾಗಿದೆ‘ ಎಂದು ದೆಹಲಿಯ ಮುಖ್ಯ ಚುನಾವಣಾಧಿಕಾರಿ ಕೆ.ಮಹೇಶ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.