
ದಾಮನ್: ಕೇಂದ್ರಾಡಳಿತ ಪ್ರದೇಶ ದಾಮನ್ನಲ್ಲಿ ಬೇಕರಿಗೆ (ಸ್ವೀಟ್ ಸ್ಟಾಲ್) ನುಗ್ಗಿದ್ದ ಚಿರತೆಯನ್ನು ಅರಣ್ಯ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ.
ಸ್ಥಳೀಯ ಪೊಲೀಸರು, ಅರಣ್ಯ ಅಧಿಕಾರಿಗಳು ಹಾಗೂ ಮಹಾರಾಷ್ಟ್ರದ ವಿಶೇಷ ಅರಣ್ಯ ಪಡೆ ಅಧಿಕಾರಿಗಳು ಸತತ 10 ಗಂಟೆಗಳ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸೆರೆ ಹಿಡಿದಿದ್ದಾರೆ.
ಮಂಗಳವಾರ ಬೆಳಿಗ್ಗೆ 11.30ರ ವೇಳೆಗೆ ನಾನಿ ದಾಮನ್ ಪ್ರದೇಶದ ಮಾರುಕಟ್ಟೆಯಲ್ಲಿರುವ ಬೇಕರಿಗೆ ನುಗ್ಗಿತ್ತು. ತಕ್ಷಣಕ್ಕೆ ಸ್ಥಳೀಯರು ಪೊಲೀಸರು ಹಾಗೂ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ತಕ್ಷಣವೇ ಪೊಲೀಸರು ಮತ್ತು ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪ್ರದೇಶವನ್ನು ಸುತ್ತುವರಿದರು. ಈ ಸಮಯದಲ್ಲಿ ಕಟ್ಟಡದ ಮೂರನೇ ಮಹಡಿಯ ಮೆಟ್ಟಿಲಿನ ಬಳಿ ಚಿರತೆ ಕುಳಿತಿರುವುದು ಪತ್ತೆಯಾಯಿತು. ಗನ್ಗಳು ಹಾಗೂ ಬಲೆಯನ್ನು ಬಳಸಿ ಕಾರ್ಯಾಚರಣೆ ನಡೆಸಿತು. ಆದರೆ ಚಿರತೆ ಆಕ್ರಮಣಕಾರಿಯಾಗಿ ಹಲವು ಬಾರಿ ಅರಣ್ಯ ಸಿಬ್ಬಂದಿಯ ಮೇಲೆ ದಾಳಿ ಮಾಡಿತು. ಈ ವೇಳೆ ಕೆಲ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಪರಿಸ್ಥಿತಿಯ ಗಂಭೀರತೆ ತಿಳಿದು ಮಹಾರಾಷ್ಟ್ರದ ವಿಶೇಷ ಅರಣ್ಯ ಪಡೆಯನ್ನು ಕರೆಸಲಾಯಿತು. ಸತತ 10 ಗಂಟೆಗಳ ಕಾರ್ಯಾಚರಣೆ ನಂತರ ಚಿರತೆಯನ್ನು ಸೆರೆ ಹಿಡಿಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಮನ್ ನಗರದಲ್ಲಿ ಎರಡು ದಿನಗಳ ಹಿಂದೆ ಚಿರತೆಯೊಂದು ಕಾಣಿಸಿಕೊಂಡಿತ್ತು. ಸೋಮವಾರ ರಾತ್ರಿ ಇಲ್ಲಿನ ಧೋಬಿ ತಲಾವ್ ಬಳಿಯೂ ಚಿರತೆ ಕಂಡುಬಂದಿತ್ತು. ಈಗ ಸೆರೆ ಹಿಡಿದಿರುವ ಚಿರತೆ ಇದೆ ಆಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.