ಮುಂಬೈ/ನವದೆಹಲಿ: ಜೋಶಿಮಠ ವಿಪತ್ತಿಗೆ ಕಳವಳ ವ್ಯಕ್ತಪಡಿಸಿರುವ ಪರಿಸರವಾದಿಗಳು, ‘ಈ ವಿಪತ್ತು ಒಂದು ಪಾಠವಾಗಿದೆ. ದೇಶಾದ್ಯಂತದ ಪರ್ವತಗಳಿಗೆ ಉಂಟುಮಾಡಿರುವ ವಿವೇಚನಾ ರಹಿತ ಹಾನಿ ಪತ್ತೆ ಮತ್ತು ತಡೆಗೆ ಸಂಬಂಧಿಸಿದ ರಾಜ್ಯಗಳೊಂದಿಗೆ ಕರಾವಳಿ ನಿಯಂತ್ರಣ ವಲಯಗಳ (ಸಿಆರ್ಜಡ್) ರೀತಿಯೇ ಕೇಂದ್ರ ಪರ್ವತ ನಿಯಂತ್ರಣ ಪ್ರಾಧಿಕಾರ ಸ್ಥಾಪಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ನ್ಯಾಟ್ ಕನೆಕ್ಟ್ ಫೌಂಡೇಶನ್ ನಿರ್ದೇಶಕ ಬಿ.ಎನ್.ಕುಮಾರ್ ಅವರು ಈ ಸಂಬಂಧ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಮೇಲ್ನಲ್ಲಿ ಪತ್ರ ಬರೆದಿದ್ದಾರೆ.
‘ಈ ವಿಪತ್ತು ಎಚ್ಚರಿಕೆಯ ಗಂಟೆ. ದೇಶದ ವಿವಿಧ ಭಾಗಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ನಡೆದಿರುವ ಬೆಟ್ಟಗಳ ಅತಿರೇಕದ ನಾಶ, ಈಶಾನ್ಯ ಮತ್ತು ಅಂಡಮಾನ್ ನಿಕೋಬರ್ ದ್ವೀಪಗಳು ಸೇರಿ ಹಿಮಾಲಯದ ಶ್ರೇಣಿಯಲ್ಲಿ ಇನ್ನೂ ಅನೇಕ ವಿಪತ್ತುಗಳಿಗೆ ಕಾರಣವಾಗಬಹುದು’ ಎಂದು ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಜೋಶಿಮಠದ ಸ್ಥಿತಿ ಪರಿಶೀಲನೆ: ಜೋಶಿಮಠದ ಪರಿಸ್ಥಿತಿ ಕುರಿತು ಮಂಗಳವಾರ ಪರಿಶೀಲನಾ ಸಭೆ ನಡೆಸಿದ ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿ (ಎನ್ಸಿಎಂಸಿ) ಕಟ್ಟಡಗಳು ಮತ್ತು ಮನೆಗಳಲ್ಲಿ ಭಾರಿ ಬಿರುಕು ಕಾಣಿಸಿರುವ ಅಪಾಯದ ಸ್ಥಳದಿಂದ ನಿವಾಸಿಗಳ ಸಂಪೂರ್ಣ ಮತ್ತು ಸುರಕ್ಷಿತ ಸ್ಥಳಾಂತರ ತಕ್ಷಣದ ಆದ್ಯತೆಯಾಗಬೇಕು ಎಂದು ಹೇಳಿದೆ.
ಜಿಯೋಟೆಕ್ನಿಕಲ್, ಭೌಗೋಳಿಕ ಮತ್ತು ಜಲವಿಜ್ಞಾನ ಸೇರಿ ಎಲ್ಲಾ ಅಧ್ಯಯನಗಳು ಮತ್ತು ತನಿಖೆಗಳನ್ನು ಕಾಲಮಿತಿಯೊಳಗೆ ಸಮನ್ವಯತೆಯಿಂದ ಪೂರ್ಣಗೊಳಿಸುವಂತೆ ಎನ್ಸಿಎಂಸಿ ಸೂಚಿಸಿದೆ.
ಅಪಾಯದಲ್ಲಿರುವ ಕಟ್ಟಡಗಳ ಸುರಕ್ಷಿತ ತೆರವಿಗೆ ಆದ್ಯತೆ ನೀಡುವಂತೆ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಸಭೆಯಲ್ಲಿ ಸೂಚಿಸಿದರು.
ಗಡಿ ನಿರ್ವಹಣೆಯ ಕಾರ್ಯದರ್ಶಿ ನೇತೃತ್ವದ ಗೃಹ ಸಚಿವಾಲಯದ ಉನ್ನತ ಅಧಿಕಾರಿಗಳ ತಂಡವು ಸದ್ಯ ಜೋಶಿಮಠದಲ್ಲಿ ಪರಿಸ್ಥಿತಿಯನ್ನು ಅಂದಾಜಿಸುತ್ತಿದೆ ಎಂದು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ಸಮಿತಿಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.