ನವದೆಹಲಿ: ದೆಹಲಿಯ ಸಚಿವೆ ಅತಿಶಿ ಅವರು ಸ್ವಾತಂತ್ರ್ಯೋತ್ಸವದ ದಿನ ತ್ರಿವರ್ಣ ಧ್ವಜ ಹಾರಿಸಲಿದ್ದಾರೆ ಎಂದು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರಿಗೆ ತಾವು ಬರೆದಿರುವ ಪತ್ರವು ಸೌಲಭ್ಯಗಳ ದುರ್ಬಳಕೆ ಎಂದು ತಿಹಾರ್ ಜೈಲಿನ ಅಧಿಕಾರಿಗಳು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ತಿಳಿಸಿದ್ದಾರೆ.
ಈ ಪತ್ರವನ್ನು ಸಕ್ಸೇನಾ ಅವರಿಗೆ ತಲುಪಿಸಿಲ್ಲ ಎಂದು ಕೂಡ ಅಧಿಕಾರಿಗಳು ಕೇಜ್ರಿವಾಲ್ ಅವರಿಗೆ ಹೇಳಿದ್ದಾರೆ. ಅವಕಾಶ ಇಲ್ಲದ ಚಟುವಟಿಕೆಗಳನ್ನು ನಡೆಸಬಾರದು ಎಂದು ತಿಹಾರ್ನ ಎರಡನೆಯ ಸಂಖ್ಯೆಯ ಜೈಲಿನ ಎಸ್ಪಿ, ಕೇಜ್ರಿವಾಲ್ ಅವರಿಗೆ ಹೇಳಿದ್ದಾರೆ. ಅನುಮತಿ ಇಲ್ಲದ ಚಟುವಟಿಕೆಗಳನ್ನು ಮುಂದುವರಿಸಿದರೆ ಸೌಲಭ್ಯಗಳಿಗೆ ಕಡಿವಾಣ ಹಾಕಬೇಕಾಗುತ್ತದೆ ಎಂದಿದ್ದಾರೆ.
ದೆಹಲಿ ಸರ್ಕಾರ ನಡೆಸುವ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಅತಿಶಿ ಅವರು ತ್ರಿವರ್ಣ ಧ್ವಜ ಆರೋಹಣ ಮಾಡಲಿದ್ದಾರೆ ಎಂದು ಲೆಫ್ಟಿನೆಂಟ್ ಗವರ್ನರ್ ಅವರನ್ನು ಉದ್ದೇಶಿಸಿ ಕಳೆದ ವಾರ ಬರೆದಿದ್ದ ಪತ್ರದಲ್ಲಿ ಕೇಜ್ರಿವಾಲ್ ಹೇಳಿದ್ದರು. ಆದರೆ ಮುಖ್ಯಮಂತ್ರಿಯಿಂದ ಯಾವುದೇ ಪತ್ರ ಬಂದಿಲ್ಲ ಎಂದು ಲೆಫ್ಟಿನೆಂಟ್ ಗವರ್ನರ್ ಕಚೇರಿ ತಿಳಿಸಿತ್ತು. ಕೇಜ್ರಿವಾಲ್ ಅವರು ಈಗ ತಿಹಾರ್ ಜೈಲಿನಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.