ADVERTISEMENT

ಮದ್ಯಕ್ಕೆ ಮುತ್ತಿಗೆ | ₹ 45 ಕೋಟಿ ವಹಿವಾಟು: ಪರಿಷ್ಕೃತ ದರದಲ್ಲಿ ಮದ್ಯ ಮಾರಾಟ

​ಪ್ರಜಾವಾಣಿ ವಾರ್ತೆ
Published 5 ಮೇ 2020, 4:17 IST
Last Updated 5 ಮೇ 2020, 4:17 IST
ಚಿತ್ರದುರ್ಗದ ಮದ್ಯದಂಗಡಿಯ ಎದುರು ಸೋಮವಾರ ಜಮಾಯಿಸಿದ್ದ ಮದ್ಯಪ್ರಿಯರು.
ಚಿತ್ರದುರ್ಗದ ಮದ್ಯದಂಗಡಿಯ ಎದುರು ಸೋಮವಾರ ಜಮಾಯಿಸಿದ್ದ ಮದ್ಯಪ್ರಿಯರು.   

ಬೆಂಗಳೂರು: 42 ದಿನಗಳ ಬಳಿಕ ತೆರೆದ ಅಂಗಡಿಗಳಿಗೆ ಜನ ಮುಗಿಬಿದ್ದು ಮದ್ಯ ಖರೀದಿಸಿದ್ದರಿಂದ ಬಹಳ ಕಡೆ ದಾಸ್ತಾನು ಖಾಲಿಯಾಗಿ ಮಧ್ಯಾಹ್ನದ ವೇಳೆಗೆ ವ್ಯಾಪಾರ ಬಂದ್‌ ಆಯಿತು. ಮೊದಲ ದಿನವೇ ₹ 45 ಕೋಟಿ ವಹಿವಾಟು ನಡೆದಿದೆ.

ಅಬಕಾರಿ ಇಲಾಖೆ ಮೂಲಗಳ ಪ್ರಕಾರ 8.5 ಲಕ್ಷ ಲೀಟರ್‌ ಭಾರತೀಯ ತಯಾರಿಕಾ ಮದ್ಯ (ಐಎಂಎಲ್‌) ಹಾಗೂ 3.9 ಲಕ್ಷ ಲೀಟರ್‌ ಬಿಯರ್‌ ವ್ಯಾಪಾರವಾಗಿದೆ.

ಕೆಲವೆಡೆ ಗರಿಷ್ಠ ಚಿಲ್ಲರೆ ಮಾರಾಟ ದರಕ್ಕಿಂತ (ಎಂಆರ್‌ಪಿ) ಹೆಚ್ಚಿನ ದರಕ್ಕೆ ಮಾರಿರುವ ದೂರುಗಳು ಬಂದಿದ್ದು, ಕ್ರಮ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

ADVERTISEMENT

ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಮದ್ಯದ ದರಗಳನ್ನು ಶೇ 6ರಷ್ಟು ಏರಿಸಿದ್ದು, ಅದರಂತೆ ಹೊಸ ದರಗಳನ್ನು ನಿಗದಿಪಡಿಸಿ ಸಂಜೆ 5 ಗಂಟೆ ಬಳಿಕ ರಾಜ್ಯ ಪಾನೀಯ ನಿಗಮ (ಕೆಎಸ್‌ಬಿಸಿಎಲ್‌) ವಹಿವಾಟು ಆರಂಭಿಸಿತು. ಪಾನೀಯ ನಿಗಮದ ಡಿಪೊಗಳಲ್ಲಿ ಸಾಕಷ್ಟು ಮದ್ಯ ದಾಸ್ತಾನಿದೆ ಎಂದೂ ಮೂಲಗಳು ಸ್ಪಷ್ಟಪಡಿಸಿವೆ.

‘ಮಂಗಳವಾರದ ನಂತರ ಗ್ರಾಹಕರಿಗೆ ಎಲ್ಲ ಬ್ರ್ಯಾಂಡ್‌ ಬಿಯರ್ ಮತ್ತು ಮದ್ಯ ಬಾಟಲಿಗಳು ದೊರೆಯಲಿವೆ. ಮದ್ಯ ಪೂರೈಕೆಗೆ ಸಮಸ್ಯೆ ಆಗಬಾರದೆಂಬ ಕಾರಣಕ್ಕೆ ಮದ್ಯ ತಯಾರಿಕಾ ಘಟಕಗಳು ಕಾರ್ಯಾರಂಭ ಮಾಡಲು ಅನುಮತಿ ನೀಡಲಾಗಿದೆ’ ಎಂದು ಅಬಕಾರಿ ಆಯುಕ್ತ ಡಾ. ಲೋಕೇಶ್‌ ತಿಳಿಸಿದರು.

ಸೋಮವಾರ ಬೆಳಿಗ್ಗೆ 9ಗಂಟೆಯಿಂದ ಸಿಎಲ್‌– 1 ಸನ್ನದು ಹೊಂದಿರುವ 700 ಮತ್ತು ಸಿಎಲ್‌– 2 ಸನ್ನದು ಇರುವ 3,500 ಅಂಗಡಿಗಳನ್ನು ತೆರೆಯಲಾಗಿದೆ. ಇನ್ನೂ 300 ಮಳಿಗೆಗಳು ಬಂದ್‌ ಆಗಿವೆ ಎಂದು ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ ಹೆಗ್ಡೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.