ನವದೆಹಲಿ: ತಮಗೆ ನೀಡಿದ್ದ ಊಟದಲ್ಲಿ ಹಲ್ಲಿ ಬಿದ್ದಿದೆ ಎಂದು ದೂರು ನೀಡಿದ್ದ ಹಿರಿಯ ನಾಗರಿಕರೊಬ್ಬರ ಕಳ್ಳಾಟ ಬಯಲಾಗಿದೆ.ರೈಲಿನಲ್ಲಿ ಉಚಿತ ಊಟ ಪಡೆಯುವ ಉದ್ದೇಶದಿಂದ ಅವರು ಹೀಗೆ ಸುಳ್ಳು ಹೇಳಿದ್ದರು ಎನ್ನಲಾಗಿದೆ.
ದೂರು ಬಂದಿದ್ದ ಕೆಲವು ಘಟನೆಗಳ ನಡುವಿನ ಸಾಮ್ಯವನ್ನು ಗಮನಿಸಿದ ರೈಲ್ವೆ ವಿಭಾಗೀಯ ವಾಣಿಜ್ಯ ನಿರ್ವಾಹಕರೊಬ್ಬರು ಪ್ರಯಾಣಿಕರೊಬ್ಬರ ಈ ತಂತ್ರಗಾರಿಕೆಯನ್ನು ಪತ್ತೆಹಚ್ಚಿದ್ದಾರೆ.
‘ಜಬಲ್ಪುರ ರೈಲ್ವೆ ನಿಲ್ದಾಣದಲ್ಲಿ ಖರೀದಿಸಿದ ಸಮೋಸದಲ್ಲಿ ಹಲ್ಲಿ ಇದೆ ಎಂದು ಜುಲೈ 14ರಂದು ಹೇಳಿಕೊಂಡಿದ್ದವ್ಯಕ್ತಿ ಇವರೇ. ಗುಂತಕಲ್ ನಿಲ್ದಾಣದಲ್ಲಿ ಬಿರಿಯಾನಿಯಲ್ಲಿ ಹಲ್ಲಿ ಇದೆ ಎಂದು ದೂರು ಬಂದಿತ್ತು. ಅನುಮಾನಗೊಂಡು, ಹಿರಿಯ ಅಧಿಕಾರಿಗಳ ಜೊತೆ ಆ ವ್ಯಕ್ತಿಯ ಫೊಟೊ ಹಂಚಿಕೊಂಡಿದ್ದೆ. ಸುಮಾರು 70 ವರ್ಷ ವಯಸ್ಸಿನ ಪಾಲ್ ಅವರು ಊಟಕ್ಕಾಗಿ ಹೀಗೆ ಮಾಡುತ್ತಿದ್ದಾರೆ’ ಎಂದು ಜಬಲ್ಪುರದ ಹಿರಿಯ ಡಿಸಿಎಂ ಬಸಂತ್ ಕುಮಾರ್ ಶರ್ಮಾ ತಿಳಿಸಿದ್ದಾರೆ.
ರೈಲ್ವೆ ಅಧಿಕಾರಿಗಳು ಪಾಲ್ ಅವರನ್ನು ವಿಚಾರಣೆಗೊಳಪಡಿಸಿದಾಗ, ‘ನನ್ನಿಂದ ತಪ್ಪಾಗಿದೆ. ನನಗೆ ವಯಸ್ಸಾಗಿದೆ. ನನ್ನ ಮಾನಸಿಕ ಸ್ವಾಸ್ಥ್ಯ ಸರಿಯಿಲ್ಲ. ನನಗೆ ಬ್ಲಡ್ ಕ್ಯಾನ್ಸರ್ ಇದೆ. ನನಗೆ ಹೋಗಲು ಅವಕಾಶ ಮಾಡಿಕೊಡಿ. ಪಂಜಾಬ್ನಲ್ಲಿ ಆಯುರ್ವೇದ ಚಿಕಿತ್ಸೆ ಪಡೆಯಬೇಕಿದೆ’ ಎಂದು ಹೇಳಿಕೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.