ADVERTISEMENT

ಅಹಮದಾಬಾದ್‌ನಲ್ಲಿ ಮತ ಚಲಾಯಿಸಿದ ಎಲ್‌ಕೆ ಅಡ್ವಾಣಿ

​ಪ್ರಜಾವಾಣಿ ವಾರ್ತೆ
Published 11 ಮೇ 2019, 10:43 IST
Last Updated 11 ಮೇ 2019, 10:43 IST
   

ಅಹಮದಾಬಾದ್‌: ಬಿಜೆಪಿ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ಅವರು ಇಲ್ಲಿನ ಶಾಹ್ಪುರ್‌ ಹಿಂದೂ ಶಾಲೆಯಲ್ಲಿ ಮತದಾನ ಮಾಡಿದರು.

ಗಾಂಧಿನಗರ ಕ್ಷೇತ್ರದ ಹಾಲಿ ಸಂಸದರಾಗಿರುವ ಅಡ್ವಾಣಿ ಅದೇ ಕ್ಷೇತ್ರದಿಂದ ಆರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಆದರೆ ಈ ಬಾರಿ ಗಾಂಧಿನಗರ ಕ್ಷೇತ್ರದಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷಅಮಿತ್‌ ಶಾ ಅವರಿಗೆ ಟಿಕೆಟ್‌ ನೀಡಲಾಗಿದೆ. ಅಡ್ವಾಣಿ ಹಾಗೂ ಹಿರಿಯ ನಾಯಕ ಮುರುಳಿ ಮನೋಹರ ಜೋಶಿ ಅವರನ್ನು ಬಿಜೆಪಿಈ ಬಾರಿ ಕಣಕ್ಕಿಳಿಸಿಲ್ಲ.

ಟಿಕೆಟ್‌ ನಿರಾಕರಣೆ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆಗಳು ಕಾವೇರುತ್ತಿದ್ದಾಗಲೇ, ‘ವೈವಿಧ್ಯತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುವುದು ಮುಖ್ಯ. ನಮ್ಮ ರಾಜಕೀಯ ವಿಷಯಗಳನ್ನು ಒಪ್ಪದೇ ಇರುವವರನ್ನು ನಾವೆಂದಿಗೂ ಶತ್ರುಗಳು ಎಂದು ಪರಿಗಣಿಸಿಲ್ಲ, ಅವರನ್ನು ನಾವು ಹಿತೈಷಿಗಳೆಂದೇ ಪರಿಗಣಿಸಿದ್ದೇವೆ. ಅದರಂತೆಯೇ ನಮ್ಮ ದೇಶದ ರಾಷ್ಟ್ರೀಯತೆ ವಿಷಯದಲ್ಲಿ ನಮ್ಮೊಂದಿಗೆ ರಾಜಕೀಯವಾಗಿ ವಿರೋಧವಿರುವವರನ್ನು ದೇಶದ್ರೋಹಿ ಎನ್ನಬಾರದು’

ADVERTISEMENT

‘ಪ್ರತಿಯೊಬ್ಬ ಪ್ರಜೆಗೂ ವೈಯಕ್ತಿಕ ಮತ್ತು ರಾಜಕೀಯ ವಿಷಯಗಳನ್ನು ಹೇಳುವ ಸ್ವಾತಂತ್ರ್ಯವಿದೆ. ತನ್ನ ಜೀವನದ ತತ್ವ ಏನೆಂದರೆ ದೇಶ ಮೊದಲು, ನಂತರ ಪಕ್ಷ, ನಾನು ಎಂಬುದು ಕೊನೆಗೆ ಬರಬೇಕು. ಈ ತತ್ವವನ್ನು ನಾನು ಜೀವನದುದ್ದಕ್ಕೂ ಪಾಲಿಸಿದ್ದೇನೆ’ ಎಂದು ಬ್ಲಾಗ್‌ನಲ್ಲಿ ಬರೆದುಕೊಂಡಿದ್ದರು.

ಇಂದು(ಏಪ್ರಿಲ್‌ 23) 13 ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳು ಸೇರಿ ಒಟ್ಟು 116 ಲೋಕಸಭೆ ಕ್ಷೇತ್ರಗಳಿಗೆ ಮೂರನೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಗುಜರಾತಿನ 26 ಲೋಕಸಭೆ ಕ್ಷೇತ್ರಗಳಿಗೆ ಹಾಗೂ ನಾಲ್ಕು ವಿಧಾನಸಭೆ ಸ್ಥಾನಗಳ ಉಪಚುನಾವಣೆ ನಡೆಯುತ್ತಿದ್ದು ಕ್ರಮವಾಗಿ 371 ಮತ್ತು 45 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಮತ ಎಣಿಕೆ ಪ್ರಕ್ರಿಯೆ ಮೇ 23ರಂದು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.