ADVERTISEMENT

ಮಿಡತೆ ದಾಳಿ: ಉತ್ತರ ಪ್ರದೇಶದ 10 ಜಿಲ್ಲೆಗಳಿಗೆ ಅಪಾಯದ ಸೂಚನೆ

ಪಿಟಿಐ
Published 26 ಮೇ 2020, 20:06 IST
Last Updated 26 ಮೇ 2020, 20:06 IST
ಜೈಪುರದಲ್ಲಿ ಮಾವಿನ ಮರಕ್ಕೆ ಲಗ್ಗೆ ಇಟ್ಟಿದ್ದ ಮಿಡತೆಗಳನ್ನು ಓಡಿಸಲು ವ್ಯಕ್ತಿಯೊಬ್ಬರು ಪ್ರಯತ್ನಿಸಿದರು  –ಎಎಫ್‌ಪಿ ಚಿತ್ರ
ಜೈಪುರದಲ್ಲಿ ಮಾವಿನ ಮರಕ್ಕೆ ಲಗ್ಗೆ ಇಟ್ಟಿದ್ದ ಮಿಡತೆಗಳನ್ನು ಓಡಿಸಲು ವ್ಯಕ್ತಿಯೊಬ್ಬರು ಪ್ರಯತ್ನಿಸಿದರು  –ಎಎಫ್‌ಪಿ ಚಿತ್ರ   

ಲಖನೌ: ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಕೋಟ್ಯಂತರ ಮೌಲ್ಯದ ಬೆಳೆಗಳನ್ನು ಮಿಡತೆಯ ಗುಂಪು ನಾಶ ಮಾಡಿರುವ ಹಿನ್ನೆಲೆಯಲ್ಲಿ, ಈ ರಾಜ್ಯಗಳಿಗೆ ಹೊಂದಿಕೊಂಡತೆ ಇರುವ ಉತ್ತರ ಪ್ರದೇಶದ 10 ಜಿಲ್ಲೆಗಳಿಗೆ ಅಪಾಯದ ಮುನ್ಸೂಚನೆ ನೀಡಲಾಗಿದೆ.

ಪಾಕಿಸ್ತಾನದಿಂದ ರಾಜಸ್ಥಾನಕ್ಕೆ ಈ ಮಿಡತೆಗಳು ಪ್ರವೇಶಿಸಿವೆ. ಕೆಲ ದಿನಗಳ ಹಿಂದೆ ಇವುಗಳು ಮಧ್ಯಪ್ರದೇಶದ ಹಲವು ಜಿಲ್ಲೆಗಳಿಗೂ ಲಗ್ಗೆ ಇಟ್ಟಿವೆ. ‘ಮಧ್ಯಪ್ರದೇಶ ಹಾಗೂ ರಾಜಸ್ಥಾನ ಗಡಿಗಳಲ್ಲಿ ಮಿಡತೆಗಳ ದಾಳಿಯನ್ನು ತಡೆಯಲು ಟ್ರ್ಯಾಕ್ಟರ್‌ಗಳಲ್ಲಿ ಕೀಟನಾಶಕ ಸಿಂಪಡಣೆ ಯಂತ್ರ, ಪವರ್‌ ಸ್ಪ್ರೇಯರ್‌ ಹಾಗೂ ಅಗ್ನಿಶಾಮಕ ವಾಹನಗಳನ್ನು ಸಜ್ಜಾಗಿರಿಸುವಂತೆ ಸೂಚಿಸಲಾಗಿದೆ. ರಾತ್ರಿ ವೇಳೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೀಟನಾಶಕಗಳನ್ನು ಸಿಂಪಡಿಸುತ್ತಿರುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜೊತೆಗೆ ಮಿಡತೆಗಳನ್ನು ಓಡಿಸಲು ಪಟಾಕಿಗಳನ್ನು ಸಿಡಿಸುವಂತೆ ಸ್ಥಳೀಯ ಗ್ರಾಮಸ್ಥರಿಗೂ ಸೂಚಿಸಲಾಗಿದೆ. ಭಾನುವಾರ ಝಾನ್ಸಿ ಪ್ರದೇಶದ ಅರಣ್ಯದಲ್ಲಿ ಮಿಡತೆಗಳು ಕಾಣಿಸಿಕೊಂಡಿದ್ದು, ಕೀಟನಾಶಕ ಸಿಂಪಡಣೆ ಬಳಿಕ ಶೇ 40ರಷ್ಟು ಮಿಡತೆಗಳು ಸತ್ತಿವೆ. ಮಹೂಬಾ ಜಿಲ್ಲೆಯಲ್ಲಿ 25 ಹೆಕ್ಟೆರ್‌ ಪ್ರದೇಶದಲ್ಲಿ ಬೆಳೆದಿದ್ದ ತರಕಾರಿಗಳು ಮಿಡತೆಗಳ ದಾಳಿಯಿಂದ ನಾಶವಾಗಿದೆ ಎನ್ನುವ ಮಾಹಿತಿ ಲಭಿಸಿದೆ. ನಷ್ಟದ ಪ್ರಮಾಣ ಇನ್ನಷ್ಟೇ ಲಭಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.