ADVERTISEMENT

ಅಮೇಠಿ, ರಾಯಬರೇಲಿಯಲ್ಲಿ ಕಾಂಗ್ರೆಸ್‌ಗೆ ಮತ ಹಾಕಿ: ಕಾರ್ಯಕರ್ತರಿಗೆ ಮಾಯಾವತಿ ಸೂಚನೆ

ಅಹಂಕಾರಿ, ನಿರಂಕುಶ ಆಡಳಿತದಿಂದ ಭಾರತಕ್ಕೆ ಮೇ.23ರಂದು ಮುಕ್ತಿ: ಬಿಎಸ್ಪಿ ಮುಖ್ಯಸ್ಥೆ

ಏಜೆನ್ಸೀಸ್
Published 11 ಮೇ 2019, 9:55 IST
Last Updated 11 ಮೇ 2019, 9:55 IST
ಸಾಂಧರ್ಭಿಕ ಚಿತ್ರ
ಸಾಂಧರ್ಭಿಕ ಚಿತ್ರ   

ಲಖನೌ: ಮೇ 5ರ ಸೋಮವಾರ ದೇಶದಲ್ಲಿ ಐದನೇ ಹಂತದ ಮತದಾನ ನಡೆಯುತ್ತಿದೆ. ಅದರಲ್ಲಿ ಉತ್ತರ ಪ್ರದೇಶದ ಅಮೇಠಿಮತ್ತು ರಾಯಬರೇಲಿ ಕ್ಷೇತ್ರಗಳೂ ಸೇರಿವೆ. ಈ ಕ್ಷೇತ್ರಗಳಲ್ಲಿಬಿಎಸ್‌ಪಿ ಮತ್ತು ಎಸ್‌ಪಿ ಕಾರ್ಯಕರ್ತರು ಕಾಂಗ್ರೆಸ್‌ಗೆ ಮತ ಹಾಕಬೇಕು ಎಂದು ಬಿಎಸ್‌ಪಿ ಮುಖ್ಯಸ್ಥೆ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರು ಅಧಿಕೃತ ಸೂಚನೆ ನೀಡಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳೆರಡೂ ಒಂದೇ. ಇಬ್ಬರೊಂದಿಗೂ ನಾವು ಮೈತ್ರಿ ಮಾಡಿಕೊಂಡಿಲ್ಲ. ಆದರೆ, ಬಿಜೆಪಿಯನ್ನು ಸೋಲಿಸಬೇಕು. ಅಮೇಠಿ ಮತ್ತು ರಾಯಬರೇಲಿಯಲ್ಲಿ ನಮ್ಮ ಮೈತ್ರಿ ಕೂಟ ಕಾಂಗ್ರೆಸ್‌ಗೆ ಮತ ಹಾಕಬೇಕು,’ ಎಂದು ಅವರು ಹೇಳಿದ್ದಾರೆ.

‘ಈ ಹಿಂದಿನ ನಾಲ್ಕು ಹಂತಗಳ ಮತದಾನದ ವೇಳೆ ಉತ್ತರ ಪ್ರದೇಶದಲ್ಲಿ ಜನತೆ ಎಸ್‌ಪಿ ಮತ್ತು ಬಿಎಸ್‌ಪಿಯನ್ನು ಬೆಂಬಲಿಸಿದ್ದಾರೆ. ಇದು ಬಿಜೆಪಿಯ ನಿದ್ದೆಗೆಡಿಸಿದೆ. ನಮ್ಮ ಮೈತ್ರಿಯಿಂದ ಕೇಂದ್ರದಲ್ಲಿ ಹೊಸ ಪ್ರಧಾನಿಯಷ್ಟೇ ಆಯ್ಕೆಯಾಗುವುದಿಲ್ಲ. ಬದಲಿಗೆ, ಉತ್ತರ ಪ್ರದೇಶಕ್ಕೆ ಹೊಸ ಸರ್ಕಾರ ಸಿಗುತ್ತದೆ,’ ಎಂದು ಅವರು ಹೇಳಿದ್ದಾರೆ.

ADVERTISEMENT

ನಿರಂಕುಶ ಮತ್ತು ಅಹಂಕಾರಿ ಆಡಳಿತದಿಂದ ಮೇ.23ರಂದು ಭಾರತಕ್ಕೆ ಸ್ವಾತಂತ್ರ್ಯ ಸಿಗಲಿದೆ ಎಂದೂ ಮಾಯಾವತಿ ಹೇಳಿದ್ದಾರೆ.

ಅಮೇಠಿ ಮತ್ತು ರಾಯಬರೇಲಿಗಳೆರಡೂ ಕಾಂಗ್ರೆಸ್‌ನ ಸಾಂಪ್ರದಾಯಿಕ ಕ್ಷೇತ್ರಗಳು. ಅದರಲ್ಲೂ ಗಾಂಧಿ ಕುಟುಂಬಕ್ಕೆ ನಿಷ್ಠೆ ಹೊಂದಿರುವ ಕ್ಷೇತ್ರಗಳು. ಅಮೇಠಿಯಿಂದ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಸ್ಪರ್ಧೆ ಮಾಡಿದ್ದರೆ, ರಾಯಬರೇಲಿಯಿಂದ ಯುಪಿಎ ಮುಖ್ಯಸ್ಥೆ ಸೋನಿಯಾಗಾಂಧಿ ಅವರು ಸ್ಪರ್ಧೆ ಮಾಡುತ್ತಿದ್ದಾರೆ. ಇಲ್ಲಿ ಮೇ 5ರಂದು ಮತದಾನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.