ADVERTISEMENT

ಚುನಾವಣಾ ಸುಧಾರಣೆ ಮಸೂದೆ: ಲೋಕಸಭೆಯಲ್ಲಿ ಅಂಗೀಕಾರ

ಪಿಟಿಐ
Published 20 ಡಿಸೆಂಬರ್ 2021, 12:46 IST
Last Updated 20 ಡಿಸೆಂಬರ್ 2021, 12:46 IST
ಲೋಕಸಭೆ: ಪಿಟಿಐ ಚಿತ್ರ
ಲೋಕಸಭೆ: ಪಿಟಿಐ ಚಿತ್ರ   

ನವದೆಹಲಿ: ಮತದಾರರ ಗುರುತಿನ ಚೀಟಿಯನ್ನು ಆಧಾರ್ ವ್ಯವಸ್ಥೆಯೊಂದಿಗೆ ಜೋಡಿಸುವ ಮಸೂದೆಗೆ ಸೋಮವಾರ ಲೋಕಸಭೆಯಲ್ಲಿ ವಿರೋಧ ಪಕ್ಷಗಳ ವಿರೋಧದ ನಡುವೆಯೂ ಧ್ವನಿ ಮತದ ಮೂಲಕ ಅನುಮೋದನೆ ದೊರೆತಿದೆ.

ಚುನಾವಣಾ ಕಾನೂನುಗಳ (ತಿದ್ದುಪಡಿ) ಮಸೂದೆ– 2021 ಅನ್ನು ಮಂಡಿಸಿದ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು, ಇದು ದೇಶದಲ್ಲಿ ನಕಲಿ ಮತದಾನವನ್ನು ಕೊನೆಗೊಳಿಸುತ್ತದೆ. ಜತೆಗೆ ಚುನಾವಣಾ ಪ್ರಕ್ರಿಯೆಯನ್ನು ಹೆಚ್ಚು ವಿಶ್ವಾಸಾರ್ಹಗೊಳಿಸುತ್ತದೆ ಎಂದರು.

ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸುವವರ ಆಧಾರ್‌ ಸಂಖ್ಯೆ ಪಡೆಯಲು ಚುನಾವಣಾ ನೋಂದಣಿ ಅಧಿಕಾರಿಗಳಿಗೆ ಈ ಮಸೂದೆ ಅವಕಾಶ ಒದಗಿಸುತ್ತದೆ ಎಂದು ಮಾಹಿತಿ ನೀಡಿದರು.

ADVERTISEMENT

ಮಸೂದೆಯ ಬಗ್ಗೆ ವಿರೋಧ ಪಕ್ಷಗಳ ಆತಂಕವು ಆಧಾರರಹಿತವಾಗಿದೆ ಎಂದ ಸಚಿವರು, ವೈಯಕ್ತಿಕ ಸ್ವಾತಂತ್ರ್ಯದ ಕುರಿತು ಸುಪ್ರೀಂ ಕೋರ್ಟ್ ತೀರ್ಪನ್ನು ವಿರೋಧ ಪಕ್ಷಗಳ ಸದಸ್ಯರು ತಪ್ಪಾಗಿ ಅರ್ಥೈಸುತ್ತಿದ್ದಾರೆ ಎಂದು ದೂರಿದರು.

ಸರ್ಕಾರವು ನಕಲಿ ಮತದಾನವನ್ನು ತಡೆಯಲು ಎಲ್ಲ ರೀತಿಯಲ್ಲೂ ಪ್ರಯತ್ನಿಸುತ್ತಿದೆ ಎಂದ ಸಚಿವರು, ಸದನವು ಅದಕ್ಕಾಗಿಯೇ ಮಸೂದೆಯನ್ನು ಬೆಂಬಲಿಸಬೇಕು ಎಂದರು. ಮಸೂದೆಯು ಸುಪ್ರೀಂ ಕೋರ್ಟ್ ತೀರ್ಪಿಗೆ ಅನುಗುಣವಾಗಿಯೇ ಇದೇ ಎಂದು ಅವರು ಹೇಳಿದರು.

ಆದೆರೆ, ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ಈ ಮಸೂದೆಯು ಪ್ರಜೆಗಳ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದವು.

‌ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಮಾತನಾಡಿ, ಮಸೂದೆಯು ಜನರ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಲಿದೆ. ಹಾಗಾಗಿ ಇದನ್ನು ಪರಿಶೀಲನೆಗಾಗಿ ‌ಸ್ಥಾಯಿ ಸಮಿತಿಗೆ ಕಳುಹಿಸಬೇಕು ಎಂದು ಆಗ್ರಹಿಸಿದರು.

ಎಐಎಂಐಎಂ, ತೃಣಮೂಲ ಕಾಂಗ್ರೆಸ್‌, ಆರ್‌ಎಸ್‌ಪಿ ಸೇರಿದಂತೆ ವಿವಿಧ ಪಕ್ಷಗಳ ಸದಸ್ಯರು ಈ ಮಸೂದೆಗೆ ವಿರೋಧ ವ್ಯಕ್ತಪಡಿಸಿದರು.

ಲಖಿಂಪುರ್ ಖೇರಿ ಹಿಂಸಾಚಾರದ ಕುರಿತಾಗಿ ವಿರೋಧ ಪಕ್ಷಗಳ ಪ್ರತಿಭಟನೆ ಮುಂದುವರಿದ ಕಾರಣ ಲೋಕಸಭೆಯನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

ರಾಜ್ಯಸಭೆಯಲ್ಲಿ ಮುಂದುವರಿದ ಪ್ರತಿಭಟನೆ: ಸದನ 12 ಸದಸ್ಯರ ಅಮಾನು ಸೇರಿದಂತೆ ವಿವಿಧ ವಿಷಯಗಳ ಕುರಿತು ವಿರೋಧ ಪಕ್ಷಗಳು ಪ್ರತಿಭಟನೆಯನ್ನು ಸೋಮವಾರವೂ ಮುಂದುವರಿಸಿದವು. ಇದರಿಂದ ರಾಜ್ಯಸಭೆಯ ಕಲಾಪಕ್ಕೂ ಅಡ್ಡಿ ಉಂಟಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.