ನವದೆಹಲಿ: ಲೋಕಪಾಲರ ಆಯ್ಕೆಗೆ ಸಂಬಂಧಿಸಿದಂತೆ ಶೋಧನಾ ಸಮಿತಿ ರಚನೆಗೆ ಕೈಗೊಂಡಿರುವ ಕ್ರಮಗಳ ಕುರಿತಂತೆ ಅಫಿಡವಿಟ್ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಶುಕ್ರವಾರ ನಿರ್ದೇಶನ ನೀಡಿದೆ.
ಮುಖ್ಯನ್ಯಾಯಮೂರ್ತಿ ರಂಜನ್ ಗೋಗೊಯಿ ಹಾಗೂ ನ್ಯಾಯಮೂರ್ತಿ ಎಸ್.ಕೆ.ಕೌಲ್ ಅವರನ್ನು ಒಳಗೊಂಡ ಪೀಠ, ಸಮಿತಿ ರಚನೆಗೆ ಸಂಬಂಧಿಸಿದಂತೆ ಕಳೆದ ವರ್ಷ ಸೆಪ್ಟೆಂಬರ್ನಿಂದ ಈ ವರೆಗೆ ಏನು ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಜ. 17ರ ಒಳಗಾಗಿ ಅಫಡವಿಟ್ ಸಲ್ಲಿಸುವಂತೆ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ ಅವರಿಗೆ ಸೂಚಿಸಿತು.
’ಕಳೆದ ವರ್ಷದ ಸೆಪ್ಟೆಂಬರ್ನಿಂದ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ‘ ಎಂದು ವೇಣುಗೋಪಾಲ ಹೇಳಿದಾಗ, ’ಸಾಕಷ್ಟು ಸಮಯ ತೆಗೆದುಕೊಂಡಿದ್ದೀರಿ. ಈ ವರೆಗೆ ಏನು ಕ್ರಮ ಕೈಗೊಂಡಿದ್ದೀರಿ‘ ಎಂದು ಪೀಠ ಪ್ರಶ್ನಿಸಿತು. ಅಟಾರ್ನಿ ಜನರಲ್ ವೇಣುಗೋಪಾಲ ಅವರು ಪುನಃ ಇದೇ ಮಾತನ್ನು ಹೇಳಿದಾಗ ’ಕಳೆದ ಸೆಪ್ಟೆಂಬರ್ ನಿಂದ ಈವರೆಗೆ ಏನು ಮಾಡಿದ್ದೀರಿ ಎಂಬ ಬಗ್ಗೆ ದಾಖಲೆಗಳನ್ನು ನೀಡಿ‘ ಎಂದು ಕಟುವಾಗಿ ಹೇಳಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.