ಲಖನೌ: ಹಿಂದೂ ಯುವತಿಯೊಬ್ಬಳನ್ನು ಆಮಿಷ ತೋರಿ ಮತಾಂತರಗೊಳಿಸಲು ಪ್ರಯತ್ನಿಸಿದ ಆರೋಪದಡಿ, ಕರ್ನಾಟಕದ ಬಿಜಾಪುರ ಜಿಲ್ಲೆಯ ಮೂಲದ ಮುಸ್ಲಿಂ ಯುವಕನೊಬ್ಬನ ವಿರುದ್ಧ ಉತ್ತರ ಪ್ರದೇಶದ ಗೋರಖ್ಪುರ ಜಿಲ್ಲೆಯಲ್ಲಿ ಮತಾಂತರ ತಡೆ ಕಾನೂನಿನಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
‘ಬಿಜಾಪುರ ಜಿಲ್ಲೆಯ ಇಂಡಿ ರೈಲು ನಿಲ್ದಾಣದ ಸಮೀಪ ವಾಸವಿರುವ ಮೆಹಬೂಬ್ ಹೆಸರಿನ ಈತ, ತನ್ನ ನಿಜವಾದ ಧರ್ಮವನ್ನು ಮರೆಮಾಚಿ ಹಿಂದೂ ಯುವತಿಯೊಬ್ಬಳನ್ನು ಆಮಿಷ ತೋರಿ ಸೆಳೆದಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಗೋರಖ್ಪುರ ಜಿಲ್ಲೆಯ ನಿವಾಸಿಯಾಗಿರುವ ಯುವತಿಯ ತಂದೆ, ‘ತನ್ನ ಮಗಳು ಲವ್ ಜಿಹಾದ್(ಮುಸ್ಲಿಂ ಯುವಕರು ಹಿಂದೂ ಯುವತಿಯನ್ನು ವಂಚಿಸಿ ಮದುವೆಯಾಗುವುದು) ಸಂತ್ರಸ್ತೆಯಾಗಿದ್ದಾಳೆ’ ಎಂದು ಆರೋಪಿಸಿ ದೂರು ನೀಡಿದ್ದರು. ‘ತನ್ನ ಮಗಳೊಂದಿಗೆ ಕಳೆದ ಒಂದು ವರ್ಷದಿಂದ ಸಂಪರ್ಕದಲ್ಲಿದ್ದ ಮೆಹಬೂಬ್, ತಾನೊಬ್ಬ ಹಿಂದೂ ಯುವಕ ಎಂದಿದ್ದ’ ಎಂದು ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನು ಆಧರಿಸಿ ಎಫ್ಐಆರ್ ದಾಖಲಿಸಲಾಗಿದೆ.
ಕಳೆದ ವಾರ ಕಾಲೇಜಿಗೆಂದು ಹೋದ ಯುವತಿ, ಮನೆಗೆ ಮರಳಿರಲಿಲ್ಲ. ಮೆಹಬೂಬ್ ತಮ್ಮ ಮಗಳನ್ನು ಅಪಹರಿಸಿದ್ದಾನೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು. ಮೆಹಬೂಬ್ನನ್ನು ಪತ್ತೆಹಚ್ಚಿ ಬಂಧಿಸಲು ಹಾಗೂ ಯುವತಿಯ ರಕ್ಷಣೆಗಾಗಿ ಪೊಲೀಸ್ ತಂಡವೊಂದು ಬಿಜಾಪುರಕ್ಕೆ ತೆರಳಿದೆ ಎಂದು ಮೂಲಗಳು ತಿಳಿಸಿದವು.
ಮತಾಂತರ ತಡೆ ಕಾನೂನು ಜಾರಿಯಾದ ಬಳಿಕ ರಾಜ್ಯದಲ್ಲಿ ಇಲ್ಲಿಯವರೆಗೂ 35 ‘ಲವ್ ಜಿಹಾದ್’ ಪ್ರಕರಣಗಳು ದಾಖಲಾಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.