ADVERTISEMENT

ಪಶ್ಚಿಮ ಬಂಗಾಳ: ಸರಳ ರೀತಿಯಲ್ಲಿ ದುರ್ಗಾ ಮೂರ್ತಿ ‌ವಿಸರ್ಜನೆ

ಪಿಟಿಐ
Published 24 ಅಕ್ಟೋಬರ್ 2020, 6:09 IST
Last Updated 24 ಅಕ್ಟೋಬರ್ 2020, 6:09 IST
ದುರ್ಗಾ ದೇವಿ
ದುರ್ಗಾ ದೇವಿ   

ಬಸಿರತ್‌ (ಪಶ್ಚಿಮ ಬಂಗಾಳ): ಪ್ರತಿ ವರ್ಷದಂತೆ ಈ ಬಾರಿಯೂ ಬಾಂಗ್ಲಾದೇಶ ಮತ್ತು ಭಾರತದ ಗಡಿಭಾಗದಲ್ಲಿರುವ ಇಚ್ಛಾಮತಿ ನದಿಯಲ್ಲಿ ದುರ್ಗಾ ದೇವಿಯ ಮೂರ್ತಿಗಳನ್ನು ‘ಬಿಜೊಯೋ ದಶಮಿ’ (ವಿಜಯ ದಶಮಿ)ಯಂದು ವಿಸರ್ಜಿಸಲಾಗುವುದು. ಆದರೆ ಈ ಬಾರಿ ಕೋವಿಡ್‌ ನಿಯಂತ್ರಿಸುವ ನಿಟ್ಟಿನಲ್ಲಿ ದುರ್ಗಾ ಮೂರ್ತಿಗಳ ವಿಸರ್ಜನೆಯನ್ನುಬಹಳ ಸರಳ ರೀತಿಯಲ್ಲಿ ನೆರವೇರಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಬಾಂಗ್ಲಾದೇಶ ಸ್ಥಳೀಯ ನಾಗರಿಕ ಸಂಸ್ಥೆ ಮತ್ತು ಪಶ್ಚಿಮ ಬಂಗಾಳ ಪೊಲೀಸರು ಶುಕ್ರವಾರ ನಡೆಸಿದ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದೆ.ಸಭೆಯಲ್ಲಿ ಬಿಎಸ್ಎಫ್ 153 ಬೆಟಾಲಿಯನ್ ಉಸ್ತುವಾರಿ ನೀರಜ್ ಕುಮಾರ್, ಬಾರ್ಡರ್ ಗಾರ್ಡ್ ಬಾಂಗ್ಲಾದೇಶ (ಬಿಜಿಬಿ) ಪ್ರತಿನಿಧಿ, ಡಿಎಸ್‌ಪಿ ಮೊಹ್ಸಿನ್ ಅಖ್ತರ್ ಮತ್ತು ಬಿಡಿಒ ಅರಿಂದಮ್ ಮುಖರ್ಜಿ ಇತರರು ಉಪಸ್ಥಿತರಿದ್ದರು.

ವಿಸರ್ಜನೆ ಸಂದರ್ಭದಲ್ಲಿ ಪ್ರತಿವರ್ಷವೂ ಭಾರತ ಮತ್ತು ಬಾಂಗ್ಲಾದೇಶದ ಹಲವು ಪೂಜಾ ಸಮಿತಿಗಳು ಭಾಗಿಯಾಗುತ್ತಿದ್ದವು. ಅಲ್ಲದೇ ಹಲವು ಪ್ರವಾಸಿಗರು ವಿಸರ್ಜನೆಯನ್ನು ವೀಕ್ಷಿಸಲು ಆಗಮಿಸುತ್ತಿದ್ದರು. ಆದರೆ ಈ ಬಾರಿ ಪೂಜಾ ಸಮಿತಿಯ ಕೆಲವು ಸದಸ್ಯರಿಗೆ ಮಾತ್ರ ಸಣ್ಣ ಅಥವಾ ದೊಡ್ಡ ದೋಣಿಯಲ್ಲಿ ಸಾಗಿ ದುರ್ಗಾ ದೇವಿಯ ವಿಗ್ರಹವನ್ನು ವಿಸರ್ಜನೆ ಮಾಡಲು ಅವಕಾಶ ನೀಡಲಾಗಿದೆ. ಅಲ್ಲದೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾ ಅಧಿಕಾರಿ ತಿಳಿಸಿದರು.

ADVERTISEMENT

ಈ ಸಂದರ್ಭದಲ್ಲಿ ಬಾಂಗ್ಲಾದೇಶದ ನಾಲ್ಕು ದುರ್ಗಾ ಮೂರ್ತಿಗಳನ್ನು ವಿಸರ್ಜಿಸಲಾಗುವುದು. ಭಾರತದಿಂದ ಬಸಿರತ್‌ ಮತ್ತು ಟಕಿಯ ಪೂಜಾ ಸಮಿತಿಗಳಸುಮಾರು 40 ಮೂರ್ತಿಗಳನ್ನು ವಿಸರ್ಜನೆ ಮಾಡಲಾಗುವುದು. ಈ ವೇಳೆ ಪ್ರತಿಯೊಬ್ಬರು ಮುಖಗವಸು ಧರಿಸುವುದು ಕಡ್ಡಾಯವಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.