ADVERTISEMENT

ಮಹಾಭಾರತದ ‘ಕೃಷ್ಣ’ನಿಗೆ ಪತ್ನಿಯ ಕಿರುಕುಳ: ದೂರು ನೀಡಿದ ನಟ ನಿತೀಶ್ ಭಾರದ್ವಾಜ್

ಏಜೆನ್ಸೀಸ್
Published 15 ಫೆಬ್ರುವರಿ 2024, 14:34 IST
Last Updated 15 ಫೆಬ್ರುವರಿ 2024, 14:34 IST
<div class="paragraphs"><p>ನಿತೀಶ್ ಭಾರದ್ವಾಜ್</p></div>

ನಿತೀಶ್ ಭಾರದ್ವಾಜ್

   

ಭೋಪಾಲ್: ಬಿ.ಆರ್. ಚೋಪ್ರಾ ಅವರ ಮಹಾಭಾರತ ಧಾರಾವಾಹಿಯಲ್ಲಿ ಕೃಷ್ಣ ಪಾತ್ರಧಾರಿಯಾಗಿದ್ದ ನಿತೀಶ್ ಭಾರದ್ವಾಜ್ ಅವರು ತಮ್ಮ ವಿಚ್ಛೇದಿತ ಪತ್ನಿ ವಿರುದ್ಧ ಕಿರುಕುಳ ಆರೋಪ ಮಾಡಿ, ದೂರು ದಾಖಲಿಸಿದ್ದಾರೆ.

ನಿತೀಶ್ ಭಾರದ್ವಾಜ್ ಅವರು ಮಧ್ಯಪ್ರದೇಶ ಕೇಡರ್‌ನ ಐಎಎಸ್ ಅಧಿಕಾರಿ ಸ್ಮಿತಾ ಘಾಟೆ ಅವರನ್ನು 2009ರಲ್ಲಿ ವರಿಸಿದ್ದರು. ಅವರಿಗೆ ಅವಳಿ ಹೆಣ್ಣುಮಕ್ಕಳಿದ್ದು, ಅವರೀಗ 11 ವರ್ಷದವರಾಗಿದ್ದಾರೆ. ಮುಂಬೈನ ಕೌಟುಂಬಿಕ ನ್ಯಾಯಾಲಯದಲ್ಲಿ ಇವರಿಬ್ಬರ ವಿಚ್ಛೇದನ ಅರ್ಜಿ ವಿಚಾರಣೆ ಹಂತದಲ್ಲಿದೆ.

ADVERTISEMENT

‘ಈ ನಡುವೆ ತನ್ನ ಮಕ್ಕಳನ್ನು ನೋಡಲು ಪತ್ನಿ ಬಿಡುತ್ತಿಲ್ಲ. ಮಕ್ಕಳನ್ನು ಭೇಟಿಯಾಗಬಾರದು ಎಂಬ ಒಂದೇ ಉದ್ದೇಶಕ್ಕೆ ಅವರ ಶಾಲೆಗಳನ್ನು ಪದೇ ಪದೇ ಬದಲಿಸುತ್ತಿದ್ದಾರೆ’ ಎಂದು ನಿತೀಶ್ ಆರೋಪಿಸಿದ್ದಾರೆ.

ಭೋಪಾಲ್ ಪೊಲೀಸ್ ಆಯುಕ್ತರಿಗೆ ದೂರು ನೀಡಿರುವ ನಿತೀಶ್, ‘ವಿಚ್ಛೇದಿತ ಪತ್ನಿಯಿಂದ ಅನುಭವಿಸುತ್ತಿರುವ ಮಾನಸಿಕ ಕಿರುಕುಳ ಹಾಗೂ ಮಕ್ಕಳನ್ನು ಅಪಹರಿಸಿರುವ ಕುರಿತು ಆರೋಪಿಸಿದ್ದೇನೆ. ಸ್ಮಿತಾ ಅವರು ಮಕ್ಕಳೊಡನೆ ಖುದ್ದು ಹಾಜರಿಗೆ ಆಯುಕ್ತರು ಸೂಚಿಸಿದ್ದರು. ಇದರಿಂದ ಅವರ ಹೇಳಿಕೆ ದಾಖಲು ಮತ್ತು ಮಕ್ಕಳನ್ನು ನೋಡಲು ಅವಕಾಶ ಸಿಕ್ಕಂತಾಗಲಿದೆ ಎಂಬ ಉದ್ದೇಶವಿತ್ತು. ಆದರೆ ಅದನ್ನು ಸ್ಮಿತಾ ನಿರಾಕರಿಸಿದ್ದಾರೆ’ ಎಂದು ಹೇಳಿದ್ದಾರೆ.

ಈ ಪ್ರಕರಣ ಕುರಿತು ತನಿಖೆ ನಡೆಸುವಂತೆ ಆದೇಶಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಹರಿನಾರಾಯಣಾಚಾರಿ ಮಿಶ್ರಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.