ಮುಂಬೈ:ಮಹಾರಾಷ್ಟ್ರದಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ರೈಲು ಹಳಿ ಜಲಾವೃತವಾಗಿ 700ಕ್ಕೂ ಹೆಚ್ಚು ಪ್ರಯಾಣಿಕರಿದ್ದ ರೈಲು ಪ್ರವಾಹದ ಮಧ್ಯೆ ಸಿಲುಕಿಕೊಂಡ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ (ಎನ್ಡಿಆರ್ಎಫ್) ಮತ್ತು ವಾಯುಪಡೆಯ ಹೆಲಿಕಾಪ್ಟರ್ಗಳು ಕಾರ್ಯಾಚರಣೆ ನಡೆಸಿದ್ದು, ಮಧ್ಯಾಹ್ನದ ವೇಳೆಗೆ ರೈಲಿನಲ್ಲಿದ್ದ ಎಲ್ಲ ಪ್ರಯಾಣಿಕರನ್ನು ರಕ್ಷಿಸಲಾಗಿದೆ.
* ಇದನ್ನೂ ಓದಿ:ಮುಂಬೈ | ಮುಂದುವರಿದ ಭಾರೀ ಮಳೆ, ರೈಲು, ವಿಮಾನ ಸಂಚಾರದಲ್ಲೂ ವ್ಯತ್ಯಯ
ರೈಲು ಹಳಿ ಜಲಾವೃತವಾಗಿರುವ ಕಾರಣ ಬಾದಲ್ಪುರ–ವಂಗಾನಿ ಮಧ್ಯೆ 700ಕ್ಕೂ ಹೆಚ್ಚುಪ್ರಯಾಣಿಕರಿದ್ದ ಮಹಾಲಕ್ಷ್ಮೀ ಎಕ್ಸ್ಪ್ರೆಸ್ ಪ್ರವಾಹದ ನೀರಿನ ಮಧ್ಯೆ ನಿಂತಿತ್ತು.
ಪ್ರವಾಹದ ಮಧ್ಯೆ ಸಿಲುಕಿದ್ದ ರೈಲನ್ನು ತಲುಪಿರುವ ಸಿಆರ್ಪಿಎಫ್ ಸಿಬ್ಬಂದಿ, ಆತಂಕಕ್ಕೆ ಒಳಗಾಗದಂತೆ ಪ್ರಯಾಣಿಕರಲ್ಲಿ ಮನವಿ ಮಾಡಿದ್ದರು.
ಅಪಾಯದಲ್ಲಿ ಸಿಲುಕಿದವರ ರಕ್ಷಣೆಗೆ ಮುಂದಾಗಬೇಕು ಎಂದು ಮಹಾರಾಷ್ಟ್ರ ಸರ್ಕಾರಎನ್ಡಿಆರ್ಎಫ್ ಮತ್ತು ವಾಯು ಪಡೆಗೆ, ಸೇನೆ ಹಾಗೂ ನೌಕಾಪಡೆಗೆಮನವಿ ಮಾಡಿತ್ತು.
ಸರ್ಕಾರದ ಮನವಿಗೆ ತಕ್ಷಣ ಸ್ಪಂದಿಸಿರುವಎನ್ಡಿಆರ್ಎಫ್ ಸಿಬ್ಬಂದಿ ಮತ್ತು ವಾಯುಪಡೆ ಹೆಲಿಕಾಪ್ಟರ್ ಬಳಸಿಕೊಂಡು ರೈಲಿನಲ್ಲಿ ಸಿಲುಕಿದ್ದವರ ರಕ್ಷಣೆಗೆ ಮುಂದಾಗಿದ್ದಾರೆ.
ಮುಂಬೈ ಪುನೆ ಮಧ್ಯದ ರೈಲು ಮಾರ್ಗದಲ್ಲಿ ಬೆಟ್ಟ ಕುಸಿದು,ಬೃಹತ್ ಬಂಡೆಗಳು ರೈಲು ಹಳಿಗಳ ಮೇಲೆ ಬಿದ್ದಿವೆ ಎಂದು ರಾಜೇಂದ್ರ ಬಿ. ಅಕ್ಲೇಕರ್ ಅವರು ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.