
ಮುಂಬೈ: ಅಧಿಕಾರಿಗಳು ಜನಸಾಮಾನ್ಯರ ಕುಂದು ಕೊರತೆಗಳಿಗೆ ನಿಧಾನವಾಗಿ ಪ್ರತಿಕ್ರಿಯಿಸುವುದು ಸರ್ವೇ ಸಾಮಾನ್ಯ. ಅದರೆ, ಅಧಿಕಾರದಲ್ಲಿರುವ ಶಾಸಕರ ಪ್ರಶ್ನೆಗಳಿಗೂ ಕೂಡ, ಅವರು ನಿರಾಸಕ್ತಿ ತೋರಿಸುತ್ತಿದ್ದಾರೆ ಎಂದು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಂಗಳವಾರ ಚರ್ಚೆಯಾಗಿದೆ.
ಸದನದಲ್ಲಿ ಈ ಕುರಿತು ಮಾತನಾಡಿದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಸುಧೀರ್ ಮುಂಗಂತಿವಾರ್, ಶಾಸಕರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಮಸ್ಯೆಗಳ ಕುರಿತು ಪತ್ರ ಬರೆದರೂ ಕೂಡ ಸರಿಯಾದ ಸಮಯಕ್ಕೆ ಪ್ರತ್ಯುತ್ತರ ಬರುತ್ತಿಲ್ಲ. ಒಂದು ಪತ್ರಕ್ಕೆ ನಾಲ್ಕು ವರ್ಷಗಳ ನಂತರ ಉತ್ತರ ಬಂದಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಅದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್, ನಿಮಗೆ ನಾಲ್ಕು ವರ್ಷಗಳಲ್ಲಿಯಾದರೂ ಉತ್ತರ ಬಂದಿದೆ. ನಾನು 2009ರಲ್ಲಿ ಶಾಸಕನಾಗಿದ್ದಾಗ ಕೇಳಿದ್ದ ಪ್ರಶ್ನೆಗೆ 2021ರಲ್ಲಿ ಉತ್ತರ ಬಂದಿದೆ. ನಾನು ಶಾಸಕನಾಗಿದ್ದಾಗ ಪ್ರಶ್ನೆ ಕೇಳಿದ್ದೆ, ಆದರೆ ಉತ್ತರ ಬರುವ ವೇಳೆಗೆ ಮುಖ್ಯಮಂತ್ರಿಯಾಗಿ, ನಂತರ ವಿಧಾನಸಭೆ ವಿರೋಧ ಪಕ್ಷದ ನಾಯಕನಾಗಿದ್ದೆ ಎಂದು ಹೇಳಿದರು. ನಂತರ, ಈ ಕುರಿತು ಕ್ರಮ ತೆಗೆದುಕೊಳ್ಳುವಂತೆ ಸ್ಪೀಕರ್ಗೆ ಮನವಿ ಮಾಡಿದರು.
ಈ ಚರ್ಚೆಗೆ ಧ್ವನಿಗೂಡಿಸಿದ ಕಾಂಗ್ರೆಸ್ ನಾಯಕ ವಿಜಯ್ ವಡೆತ್ತಿವಾರ್ ಕೂಡ ಮುಖ್ಯಮಂತ್ರಿಗಳ ಬೆಂಬಲಕ್ಕೆ ನಿಂತರು.
ನಂತರ ಮಾತನಾಡಿದ ಸ್ಪೀಕರ್ ರಾಹುಲ್ ನಾರ್ವೇಕರ್, ಶಾಸಕರ ಸಮಸ್ಯೆ ಮತ್ತು ಪತ್ರಗಳಿಗೆ ಅಧಿಕಾರಿಗಳು ಕಾಲಮಿತಿಯಲ್ಲಿ ಉತ್ತರಿಸಲು ಡಿಜಿಟಲ್ ವೇದಿಕೆಯೊಂದನ್ನು ರೂಪಿಸಲಾಗುತ್ತದೆ. ಇದರಿಂದ ವಿಳಂಬವಾಗುವುದು ತಪ್ಪುತ್ತದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.