ಮುಂಬೈ: ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಮಂಗಳವಾರ ತಮ್ಮ ಸಂಪುಟ ಪುನಾರಚಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಶಿವಸೇನಾ–ಕಾಂಗ್ರೆಸ್–ಎನ್ಸಿಪಿ ಹಾಗೂ ಇತರ ಕೆಲವು ಸಣ್ಣಪಕ್ಷಗಳ ಮೈತ್ರಿಕೂಟವಾದ ‘ಮಹಾ ಅಘಾಡಿ’ಯು ನ. 28ರಂದು ಮಹಾರಾಷ್ಟ್ರದಲ್ಲಿ ಅಧಿಕಾರ ವಹಿಸಿಕೊಂಡಿತ್ತು. ಅಧಿಕಾರ ಸ್ವೀಕರಿಸಿ ಸುಮಾರು ಒಂದು ತಿಂಗಳ ನಂತರ ಸಂಪುಟ ಪುನಾರಚನೆಗೆ ಮುಖ್ಯಮಂತ್ರಿ ಉದ್ಧವ್ ಮುಂದಾಗಿದ್ದು, ಮುಖ್ಯಮಂತ್ರಿಗೆ ಇದು ಅತ್ಯಂತ ಸವಾಲಿನ ಹಂತವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಎನ್ಸಿಪಿ ಮುಖಂಡ ಅಜಿತ್ ಪವಾರ್ ಅವರು ಉಪಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತ ಎನ್ನಲಾಗಿದೆ. ಆದರೆ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕರಾದ ಪೃಥ್ವಿರಾಜ್ ಚವಾಣ್ ಹಾಗೂ ಅಶೋಕ್ ಚವಾಣ್ ಅವರಿಗೆ ಯಾವ ಜವಾಬ್ದಾರಿ ವಹಿಸಲಾಗುತ್ತದೆ ಎಂಬುದು ಕುತೂಹಲದ ವಿಚಾರವಾಗಿದೆ.
ಮೈತ್ರಿ ಪಕ್ಷಗಳ ಸಮತೋಲನ ಕಾಯುವುದರ ಜೊತೆಗೆ ರಾಜ್ಯದ ಪ್ರಾದೇಶಿಕ ಪ್ರಾತಿನಿಧ್ಯವನ್ನು ಕಾಪಾಡಿಕೊಳ್ಳುವ ಸವಾಲೂ ಉದ್ಧವ್ ಅವರ ಮುಂದಿದೆ.
‘ಉದ್ಧವ್ ಅವರು ಎನ್ಸಿಪಿ ಮುಖಂಡ ಶರದ್ ಪವಾರ್ ಜತೆ ಚರ್ಚಿಸಿದ್ದು, ಸಂಪುಟ ಸೇರಲಿರುವವರ ಪಟ್ಟಿ ಈಗಾಗಲೇ ಸಿದ್ಧವಾಗಿದೆ’ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.