ADVERTISEMENT

ಪ್ರವಾದಿ ಮಹಮ್ಮದ್ ಕುರಿತ ಅವಹೇಳನಕಾರಿ ಹೇಳಿಕೆ: ನೂಪುರ್ ಶರ್ಮಾಗೆ ಸಮನ್ಸ್

ಪಿಟಿಐ
Published 7 ಜೂನ್ 2022, 13:42 IST
Last Updated 7 ಜೂನ್ 2022, 13:42 IST
ನೂಪುರ್ ಶರ್ಮಾ
ನೂಪುರ್ ಶರ್ಮಾ   

ಮುಂಬೈ: ಪ್ರವಾದಿ ಮಹಮ್ಮದ್ ಅವರ ಕುರಿತಾದ ವಿವಾದಿತ ಹೇಳಿಕೆ ಕುರಿತಂತೆ ತಮ್ಮ ಹೇಳಿಕೆ ದಾಖಲಿಸಲು ಇದೇ 22ರಂದು ಹಾಜರಾಗುವಂತೆ ಬಿಜೆಪಿಯ ಮಾಜಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಅವರಿಗೆ ಮುಂಬೈ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅವಹೇಳನಕಾರಿ ಹೇಳಿಕೆ ಕುರಿತಂತೆ ನೂಪುರ್ ವಿರುದ್ಧ ಥಾಣೆ ಜಿಲ್ಲೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಅದರ ಹಿನ್ನೆಲೆಯಲ್ಲಿ ಜೂನ್ 22ರಂದು ಹಾಜರಾಗಿ ಹೇಳಿಕೆ ದಾಖಲಿಸಲು ಸಮನ್ಸ್ ಜಾರಿ ಮಾಡಲಾಗಿದೆ ಎಂದು ಥಾಣೆ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಫ್‌ಐಆರ್‌ನಲ್ಲಿರುವ ವಿವರವನ್ನು ಉಲ್ಲೇಖಿಸಿ ನೂಪುರ್ ಶರ್ಮಾ ಅವರಿಗೆ ಮುಂಬೈ ಪೊಲೀಸರು ಇಮೇಲ್ ಮತ್ತು ಸ್ಪೀಡ್ ಪೋಸ್ಟ್ ಮೂಲಕ ಸಮನ್ಸ್ ಕಳುಹಿಸಿದ್ದಾರೆ ಎಂದೂ ಅವರು ಹೇಳಿದ್ದಾರೆ.

ADVERTISEMENT

ಪ್ರವಾದಿ ಮಹಮ್ಮದ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆಗೆ ಸಂಬಂಧಿಸಿದಂತೆ ಭಾನುವಾರ ಬಿಜೆಪಿ, ಅವರನ್ನು(ನೂಪುರ್ ಶರ್ಮಾ) ಪಕ್ಷದ ವಕ್ತಾರೆ ಹುದ್ದೆಯಿಂದ ಅಮಾನತು ಮಾಡಿತ್ತು.

ಈ ಮಧ್ಯೆ ನೂಪುರ್ ಶರ್ಮಾ ಚರ್ಚೆಯಲ್ಲಿ ಭಾಗವಹಿಸಿದ್ದ ಸುದ್ದಿವಾಹಿನಿಗೆ ಅವರ(ನೂಪುರ್) ಹೇಳಿಕೆ ಕುರಿತಾದ ವಿಡಿಯೊ ಒದಗಿಸುವಂತೆ ಮುಂಬೈ ಪೊಲೀಸರು ಕೇಳಿದ್ದಾರೆ.

ದೂರದರ್ಶನದ ಚರ್ಚೆಯೊಂದರಲ್ಲಿ ಪ್ರವಾದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಮುಂಬೈ ಪೊಲೀಸರು ಮೇ 28 ರಂದು ನೂಪುರ್ ವಿರುದ್ಧ ಪೈದೋನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಭಾರತೀಯ ದಂಡ ಸಂಹಿತೆಯ ವಿಧಿ 295ಎ (ಯಾವುದೇ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಆ ವರ್ಗದ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ಮಾಡುವ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು), 153ಎ (ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 505(2) (ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗುವ ಹೇಳಿಕೆಗಳು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.