ಮುಂಬೈ: ಎರಡು ಡೋಸ್ ಲಸಿಕೆ ಹಾಕಿಸಿಕೊಂಡ ಜನಸಾಮಾನ್ಯರೆಲ್ಲರಿಗೂ ಮುಂಬೈ ಉಪನಗರ ರೈಲುಗಳಲ್ಲಿ ಪ್ರಯಾಣಿಸಲು ಮಹಾರಾಷ್ಟ್ರ ಸರ್ಕಾರ ಅವಕಾಶ ಕಲ್ಪಿಸಿದೆ.
ಮುಂಬೈ ಮೆಟ್ರೋಪಾಲಿಟನ್ ಪ್ರದೇಶದಲ್ಲಿ (ಎಂಎಂಆರ್) ಉಪನಗರ ರೈಲುಗಳಲ್ಲಿ ಪ್ರಯಾಣಿಸಲು ಕೋವಿಡ್-19 ಲಸಿಕೆ ಹಾಕಿಸಿಕೊಂಡವರಿಗೆ ಅವರ ಉದ್ಯೋಗದ ಸ್ವರೂಪ ಪರಿಗಣಿಸದೆ, ಅನಿವಾರ್ಯವಲ್ಲದ ವಲಯಗಳಲ್ಲಿ ಕೆಲಸ ಮಾಡುವವರನ್ನು ಸಹ ಒಳಗೊಳ್ಳಲು ವಿಸ್ತರಿಸಿ ಮಹಾರಾಷ್ಟ್ರ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ. ಆದರೆ, ಎರಡನೇ ಡೋಸ್ ಪಡೆದು 14 ದಿನಗಳನ್ನು ಪೂರ್ಣಗೊಳಿಸಬೇಕೆಂಬ ನಿಯಮವನ್ನು ಆದೇಶದಲ್ಲಿ ಸೇರಿಸಿದೆ.
ಪ್ರಸ್ತುತ, ಕೇಂದ್ರ ರೈಲ್ವೆ ಮತ್ತು ಪಶ್ಚಿಮ ರೈಲ್ವೆ ಜನಸಂದಣಿ ಕಡಿಮೆ ಮಾಡಲು ದೈನಂದಿನ ಟಿಕೆಟ್ಗಳ ಬದಲಿಗೆ ಲಸಿಕೆ ಹಾಕಿದ ಪ್ರಯಾಣಿಕರಿಗೆ ಮಾಸಿಕ ಪಾಸ್ ಅನ್ನು ನೀಡುತ್ತಿವೆ. ಎರಡೂ ರೈಲ್ವೆಗಳು ಸೋಮವಾರ ಮುಂಬೈನಲ್ಲಿ ಉಪನಗರ ಸೇವೆಗಳನ್ನು ಅಕ್ಟೋಬರ್ 28ರಿಂದ ಕೋವಿಡ್ ಪೂರ್ವದಲ್ಲಿದ್ದಂತೆ ಶೇ 100 ಸಾಮರ್ಥ್ಯದಲ್ಲಿ ನಿರ್ವಹಿಸಲಿವೆ. ಸಾರ್ವಜನಿಕರಿಗೆ ಅಸ್ತಿತ್ವದಲ್ಲಿರುವ ಪ್ರಯಾಣದ ನಿರ್ಬಂಧಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈವರೆಗೆ ಸರ್ಕಾರಿ ನೌಕರರು ಮತ್ತು ಅಗತ್ಯ ಸೇವೆಗಳ ಸಿಬ್ಬಂದಿಗೆ ಮಾತ್ರ ಉಪನಗರ ರೈಲುಗಳಲ್ಲಿ ಪ್ರಯಾಣಿಸಲು ಅನುಮತಿಸಲಾಗಿತ್ತು.
ಕೋವಿಡ್-19 ಸೋಂಕು ಹರಡಿದ ನಂತರ 2020ರ ಮಾರ್ಚ್ 22ರಿಂದ ಮುಂಬೈ ಜೀವನಾಡಿ ಎಂದೆ ಕರೆಯುವ ಉಪನಗರ ರೈಲು ಸೇವೆಗಳನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ಮಹಾರಾಷ್ಟ್ರ ಸರ್ಕಾರ ಮತ್ತು ಕೇಂದ್ರ ರೈಲ್ವೆ ಸಚಿವಾಲಯದ ಅನುಮೋದನೆಯಂತೆ 2020ರ ಜೂನ್ 15ರಿಂದ ಅಗತ್ಯ ಸೇವೆಯಲ್ಲಿರುವವರಿಗೆ ಮಾತ್ರ ಉಪನಗರ ರೈಲು ಸೇವೆಗಳನ್ನು ಒದಗಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.