ನವದೆಹಲಿ (ಪಿಟಿಐ): ಶಿವಸೇನಾ ಏಕನಾಥ ಶಿಂದೆ ಬಣ ಹಾಗೂ ಶಿವಸೇನಾ ಉದ್ಧವ್ ಠಾಕ್ರೆ ಬಣದಿಂದ ಉಂಟಾಗಿದ್ದ ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಫೆಬ್ರುವರಿ 14ರಂದು ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.
ಶಿವಸೇನಾ ಉದ್ಧವ್ ಠಾಕ್ರೆ ಬಣದ ಪರ ವಕೀಲ ಕಪಿಲ್ ಸಿಬಲ್ ವಾದಿಸಿ, ‘ಸ್ಪೀಕರ್ ಅವರನ್ನು ಅಮಾನತುಗೊಳಿಸಲು ಮೊದಲೇ ನಿರ್ಣಯ ಮಂಡನೆ ಆಗಿರುವಾಗ, ಅದೇ ಸ್ಪೀಕರ್, ಶಾಸಕರನ್ನು ಅನರ್ಹಗೊಳಿಸುವ ಪ್ರಕ್ರಿಯೆಯನ್ನು ಕೈಗೊಳ್ಳುವಂತಿಲ್ಲ ಎಂದು 2016ರಲ್ಲಿ ಐವರು ನ್ಯಾಯಮೂರ್ತಿಗಳಿದ್ದ ಪೀಠವು ನಬಂ ರಬಿಯಾ ಪ್ರಕರಣದಲ್ಲಿ ಹೇಳಿದೆ. ಈ ತೀರ್ಪಿನ ಮರು ಪರಿಶೀಲನೆಯಾಗಬೇಕು. ಏಳು ನ್ಯಾಯಮೂರ್ತಿಗಳ ಪೀಠವು ಇದರ ಮರುಪರಿಶೀಲನೆ ನಡೆಸಬೇಕು’ ಎಂದು ಕೋರಿದರು.
ಈ ಕುರಿತು ಫೆ.14ರಂದು ವಿಚಾರಣೆ ನಡೆಸುವುದಾಗಿ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠವು ಹೇಳಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.