ADVERTISEMENT

ಶಿವಾಜಿ ಗುರು ಯಾರು? ವಿವಾದ ಹುಟ್ಟಿಸಿದ ಮಹಾರಾಷ್ಟ್ರ ರಾಜ್ಯಪಾಲ ಕೋಶ್ಯಾರಿ ಹೇಳಿಕೆ

‘ಸಮರ್ಥ ರಾಮದಾಸ್‌ ಛತ್ರಪತಿ ಶಿವಾಜಿ ಮಹಾರಾಜರ ಗುರು’

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2022, 11:37 IST
Last Updated 28 ಫೆಬ್ರುವರಿ 2022, 11:37 IST
ಶಿವಾಜಿ
ಶಿವಾಜಿ   

ಮುಂಬೈ: ಸಮರ್ಥ ರಾಮದಾಸ್ ಅವರು ಛತ್ರಪತಿ ಶಿವಾಜಿ ಮಹಾರಾಜರ ಗುರು ಎಂದು ರಾಜ್ಯಪಾಲ ಭಗತ್‌ಸಿಂಗ್ ಕೋಶ್ಯಾರಿ ಅವರ ಹೇಳಿಕೆಗೆ ಬಿಜೆಪಿ ಸಂಸದ ಉದಯರಾಜೇ ಭೋಸಲೆ ಸೇರಿದಂತೆ ಮಹಾರಾಷ್ಟ್ರದ ಹಲವು ರಾಜಕಾರಣಿಗಳು ಸೋಮವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಛತ್ರಪತಿ ಶಿವಾಜಿ ಮಹಾರಾಜರ ವಂಶಸ್ಥರಾದ ಭೋಸಲೆ ಅವರು, ‘ಈ ಹೇಳಿಕೆಯು ಶಿವಾಜಿ ಮಹಾರಾಜರ ಅನುಯಾಯಿಗಳು ಮತ್ತು ಇಡೀ ಮಹಾರಾಷ್ಟ್ರದ ಜನರ ಭಾವನೆಗಳಿಗೆ ನೋವುಂಟು ಮಾಡಿದೆ. ತಕ್ಷಣವೇ ಅವರು ಹೇಳಿಕೆಯನ್ನು ಹಿಂತೆಗೆದುಕೊಳ್ಳಬೇಕು’ ಎಂದು ರಾಜ್ಯಪಾಲರನ್ನು ಒತ್ತಾಯಿಸಿದ್ದಾರೆ.

ಔರಂಗಾಬಾದ್‌ನಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಕೋಶ್ಯಾರಿ ಅವರು ಈ ಹೇಳಿಕೆ ನೀಡಿದ್ದರು.

ADVERTISEMENT

‘ರಾಮದಾಸ್ ಅವರು ಶಿವಾಜಿಗೆ ಎಂದಿಗೂ ಗುರುವಾಗಿರಲಿಲ್ಲ. ಶಿವಾಜಿಗೆ ನಿಜವಾದ ಗುರು ಅವರ ತಾಯಿ ರಾಜಮಾತಾ ಜೀಜಾಮಾತಾ ಆಗಿದ್ದರು. ನಿಜವಾದ ಇತಿಹಾಸವನ್ನು ತಿಳಿದುಕೊಂಡು ರಾಜ್ಯಪಾಲರು ಹೇಳಿಕೆ ನೀಡಬೇಕಿತ್ತು’ ಎಂದು ಭೋಸಲೆ ಹೇಳಿದ್ದಾರೆ.

ಶಿವಸೇನಾ ಸಂಸದ ಸಂಜಯ್‌ ರಾವುತ್‌ ಅವರು, ರಾಜ್ಯಪಾಲರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಬಗ್ಗೆ ಬಿಜೆಪಿ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಹಾಗೂ ಕಾಂಗ್ರೆಸ್‌ನ ರಾಜ್ಯ ಘಟಕದ ಅಧ್ಯಕ್ಷ ನಾನಾ ಪಟೋಲೆ ಅವರು ಸಹ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.