ADVERTISEMENT

ಮಹಾರಾಷ್ಟ್ರ: ಭಾರಿ ಮಳೆ, ಭೂಕುಸಿತಕ್ಕೆ ಮೃತರ ಸಂಖ್ಯೆ 60ಕ್ಕೆ ಏರಿಕೆ

ಡೆಕ್ಕನ್ ಹೆರಾಲ್ಡ್
Published 23 ಜುಲೈ 2021, 9:59 IST
Last Updated 23 ಜುಲೈ 2021, 9:59 IST
ಮುಂಬೈನ ದಾದರ್‌ನ ರಸ್ತೆಯೊಂದರ ದೃಶ್ಯ
ಮುಂಬೈನ ದಾದರ್‌ನ ರಸ್ತೆಯೊಂದರ ದೃಶ್ಯ   

ರಾಯಗಢ:ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಪ್ರವಾಹದ ಸ್ಥಿತಿ ಏರ್ಪಟ್ಟಿದ್ದು, ಅಲ್ಲಲ್ಲಿ ಭೂಕುಸಿತದ ವರದಿಗಳಾಗಿವೆ. ರಾಜ್ಯದಾದ್ಯಂತ ಮೃತರ ಸಂಖ್ಯೆ 60ಕ್ಕೆ ಏರಿಕೆಯಾಗಿದೆ.ರಾಯಗಢ ಜಿಲ್ಲೆಯೊಂದರಲ್ಲೇ ಭೂಕುಸಿತ ಮತ್ತು ಪ್ರವಾಹಕ್ಕೆ ಕನಿಷ್ಠ 36 ಮಂದಿ ಮೃತರಾಗಿದ್ದಾರೆ.

ರಾಯಗಢ ಜಿಲ್ಲೆಯ ತಾಲಾಯ್‌ನಲ್ಲಿ 32, ಸಖರ್‌ ಸುತರ್‌ವಾಡಿಯಲ್ಲಿ 4 ಮಂದಿ ಮೃತಪಟ್ಟಿದ್ದಾರೆ. ಕನಿಷ್ಠ 30 ಮಂದಿ ಭೂಕುಸಿತ, ಪ್ರವಾಹದ ವಿಕೋಪಕ್ಕೆ ಸಿಲುಕಿ ಪ್ರಾಣಾಪಾಯದಲ್ಲಿ ಇದ್ದಾರೆ ಎಂದು ಕಲೆಕ್ಟರ್‌ ತಿಳಿಸಿದ್ದಾರೆ.

ಪಶ್ಚಿಮ ಮಹಾರಾಷ್ಟ್ರದ ಕೊಂಕಣ ಬೆಲ್ಟ್‌ನಲ್ಲಿ ಸಂಭವಿಸಿದ ಸರಣಿ ಭೂಕುಸಿತ ಅವಘಡಗಳಲ್ಲಿ 12ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದಾರೆ.

ADVERTISEMENT

ಶುಕ್ರವಾರ ಬೆಳಗ್ಗೆಯಿಂದ ರತ್ನಗಿರಿ ಜಿಲ್ಲೆಯ ಚಿಪ್ಲುನ್‌ ಎಂಬ ಪ್ರದೇಶದಲ್ಲಿ ಸುಮಾರು 5-6 ಸಾವಿರ ಮಂದಿ ಇಕ್ಕಟ್ಟಿಗೆ ಸಿಲುಕಿದ್ದಾರೆ ಎಂದು ವರದಿಯಾಗಿದೆ.

ಮುಂಬೈನಲ್ಲಿ ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. 'ಪ್ರಾಥಮಿಕ ವರದಿ ಅನುಸಾರ ರಾಯಗಢದಲ್ಲಿ 30-35 ಮಂದಿ ಮೃತ ಪಟ್ಟಿದ್ದಾರೆ. ರಕ್ಷಣಾ ಕಾರ್ಯ ಬರದಿಂದ ಸಾಗಿದೆ. ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು' ಎಂದು ಠಾಕ್ರೆ ತಿಳಿದ್ದಾರೆ.

ಇದೇ ವೇಳೆ ರಾಜ್ಯದಲ್ಲಿ ಮಳೆಯಿಂದಾಗಿ 40 ರಿಂದ 45 ಮಂದಿ ಮೃತಪಟ್ಟಿದ್ದಾರೆ ಎಂದು ಪರಿಹಾರ ಹಾಗೂ ಪುನರ್ವಸತಿ ಸಚಿವ ವಿಜಯ್‌ ವಾಡೆತ್ತಿವರ್‌ ಹೇಳಿದ್ದಾರೆ.

ಕರ್ನಾಟಕದ ಆಲಮಟ್ಟಿ ಜಲಾಶಯದಿಂದ ನೀರು ಬಿಡಲಾಗುತ್ತಿದ್ದು, ಇದರಿಂದ ಕೊಲ್ಹಾಪುರ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿಯನ್ನು ತಂದೊಡ್ಡಿದೆ ಎಂದು ವಿಜಯ್‌ ವಾಡೆತ್ತಿಕರ್‌ ತಿಳಿಸಿದ್ದಾರೆ.

ಮಹಾರಾಷ್ಟ್ರದ ಹಲವು ಪ್ರದೇಶಗಳಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. 2005 ಮತ್ತು 1967ರಲ್ಲಿ ಉಂಟಾದ ಪ್ರವಾಹ ಮತ್ತು ಭೂಕುಸಿತಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಈ ಬಾರಿ ಸಂಭವಿಸಿದೆ ಎನ್ನಲಾಗುತ್ತಿದೆ.

ಕೊಲ್ಹಾಪುರದ ಪಂಚ್‌ಗಂಗಾ, ಸಾಂಗ್ಲಿಯ ಕೃಷ್ಣಾ ಹಾಗೂ ಸತಾರಾದ ಕೊಯ್ನಾ ನದಿ ಸೇರಿದಂತೆ ಹಲವು ನದಿಗಳಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.