ನಾಗಪುರ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ವಿವಿಧ ಗಡಿಭಾಗಗಳಲ್ಲಿ ನಡೆಯುತ್ತಿರುವ ಬೃಹತ್ ರೈತ ಪ್ರತಿಭಟನೆ ಮತ್ತು ‘ರೈತ ಮಹಾಸಭೆ'ಗಳು ದೇಶದ ಇತರೆ ಭಾಗಗಳಿಗೂ ವಿಸ್ತರಿಸುವ ಲಕ್ಷಣಗಳು ಕಾಣುತ್ತಿವೆ.
ಇದರ ಮೊದಲ ಹೆಜ್ಜೆಯಾಗಿ ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾದ(ಎಸ್ಕೆಂ) ನಾಯಕ ರಾಕೇಶ್ ಟಿಕಾಯತ್ ಅವರು ಇದೇ 20ರಂದು ಮಹಾರಾಷ್ಟ್ರದ ಯಾವತ್ಮಲ್ ಜಿಲ್ಲೆಯಲ್ಲಿ ‘ರೈತ ಮಹಾಸಭೆ ‘(ಕಿಸಾನ್ ಮಹಾಪಂಚಾಯತ್)'ನಡೆಸುತ್ತಿದ್ದು, ಇದೇ ವೇಳೆ ಸಾರ್ವಜನಿಕ ರ್ಯಾಲಿಯನ್ನೂ ಆಯೋಜಿಸಲಾಗಿದೆ ಎಂದು ಮೋರ್ಚಾದ ಮಹಾರಾಷ್ಟ್ರ ರಾಜ್ಯದ ಸಂಯೋಜಕ ಸಂದೀಪ್ ಗಿಡ್ಡೆ ಗುರುವಾರ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
‘ದೇಶದಲ್ಲೇ ಅತಿ ಹೆಚ್ಚು ರೈತರ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿರುವ ಯಾವತ್ಮಲ್ ಜಿಲ್ಲೆಯಿಂದ ರಾಕೇಶ್ ಟಿಕಾಯತ್ ಅವರು ರೈತ ಮಹಾಸಭೆ ಆರಂಭಿಸುತ್ತಿದ್ದಾರೆ. ಇಲ್ಲಿ ನಡೆಯುವ ಸಭೆ ಮತ್ತು ರ್ಯಾಲಿಯಲ್ಲಿ ರಾಕೇಶ್ ಅವರೊಂದಿಗೆ ಮುಖಂಡ ಯದುವೀರ್ಸಿಂಗ್ ಮತ್ತು ಎಸ್ಕೆಎಂ ಒಕ್ಕೂಟದ ಕೆಲವು ನಾಯಕರು ಪಾಲ್ಗೊಳ್ಳಲಿದ್ದಾರೆ‘ ಎಂದು ಅವರು ತಿಳಿಸಿದರು.
ವಿದರ್ಭಾ ಮತ್ತು ಮಹಾರಾಷ್ಟ್ರದ ಕೆಲವು ಭಾಗಗಳಿಂದ ರೈತರು ಈ ಮಹಾಸಭೆಗೆ ಆಗಮಿಸುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳಿಂದ ಸಭೆ ಮತ್ತು ರ್ಯಾಲಿ ನಡೆಸಲು ಅನುಮತಿ ಪಡೆಯಲಾಗುತ್ತಿದೆ. ಪ್ರತಿಭಟನೆಗಾಗಿ ರೈತ ಸಂಘಟನೆಗಳು ಅನುಮತಿ ಕೇಳಿರುವ ಕುರಿತು ಯಾವತ್ಮಲ್ ಜಿಲ್ಲೆಯ ಪೊಲೀಸ್ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.