ಮುಂಬೈ: ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ನ ಮಹಾ ವಿಕಾಸ ಅಘಾಡಿ (ಎಂವಿಎ)ಯ 25 ನಾಯಕರ 'ವರ್ಗೀಕೃತ' ಭದ್ರತೆಯನ್ನು ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ಶುಕ್ರವಾರ ರದ್ದು ಮಾಡಿದೆ.
ಇದರರ್ಥ ಈ ನಾಯಕರಿಗೆ ಅವರ ಮನೆ ಅಥವಾ ಬೆಂಗಾವಲಿಗೆ ಶಾಶ್ವತ ಪೊಲೀಸ್ ಭದ್ರತೆ ಲಭ್ಯವಿರುವುದಿಲ್ಲ. ನಾಯಕರಿಗೆ ಒದಗಿಸಲಾಗಿದ್ದ ಭದ್ರತೆಯನ್ನು ಮರುಮೌಲ್ಯಮಾಪನ ಮಾಡಿದ ನಂತರ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
25 ನಾಯಕರ ಪೈಕಿ ಹಲವರು ಮಾಜಿ ಮಂತ್ರಿಗಳಿದ್ದಾರೆ. ಹಿಂದಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಅವರ ಕುಟುಂಬದ ಭದ್ರತೆಯನ್ನು ಹಾಗೇ ಉಳಿಸಿಕೊಳ್ಳಲಾಗಿದೆ.
ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ನಾಯಕ ಶರದ್ ಪವಾರ್ ಮತ್ತು ಅವರ ಮಗಳು ಮತ್ತು ಬಾರಾಮತಿ ಲೋಕಸಭಾ ಸಂಸದೆ ಸುಪ್ರಿಯಾ ಸುಳೆ ಸೇರಿದಂತೆ ಅವರ ಕುಟುಂಬದ ಭದ್ರತೆಯನ್ನು ಮುಂದುವರಿಸಲಾಗಿದೆ.
ಜಯಂತ್ ಪಾಟೀಲ್, ಛಗನ್ ಭುಜಬಲ್ ಮತ್ತು ಜೈಲಿನಲ್ಲಿರುವ ಅನಿಲ್ ದೇಶಮುಖ್ ಸೇರಿದಂತೆ ಇತರ ಕೆಲವು ಎನ್ಸಿಪಿ ನಾಯಕರ ಭದ್ರತೆಯನ್ನು ಹಿಂಪಡೆಯಲಾಗಿದೆ. ಪಾಟೀಲ್, ಭುಜಬಲ್ ಮತ್ತು ದೇಶಮುಖ್ ಈ ಹಿಂದೆ ಗೃಹ ಸಚಿವರಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.