ADVERTISEMENT

ನಾವೇ ನಿಜವಾದ ಶಿವಸೇನಾ, ಬಾಳಾ ಸಾಹೇಬ್ ನಿಷ್ಠರು: ಬಂಡಾಯ ನಾಯಕ ಶಿಂಧೆ

ಪಿಟಿಐ
Published 24 ಜೂನ್ 2022, 6:48 IST
Last Updated 24 ಜೂನ್ 2022, 6:48 IST
   

ಮುಂಬೈ:ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರವು, ಶಿವಸೇನಾದ 12 ಶಾಸಕರನ್ನು ಅನರ್ಹಗೊಳಿಸಲು ಪ್ರಯತ್ನಿಸುತ್ತಿರುವುದರ ವಿರುದ್ಧ ಹೇಳಿಕೆ ನೀಡಿರುವ ಶಿವಸೇನಾದ ಬಂಡಾಯ ಗುಂಪಿನ ನಾಯಕ ಏಕನಾಥ ಶಿಂಧೆ, 'ನಾವೇ ನಿಜವಾದ ಶಿವಸೇನಾ, ನನ್ನನ್ನು ಹಾಗೂ ಬೆಂಬಲಿಗರನ್ನು ಅನರ್ಹಗೊಳಿಸುವ ಬೆದರಿಕೆಗಳಿಗೆ ಹೆದರುವುದಿಲ್ಲ' ಎಂದು ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಗುರುವಾರ ತಡರಾತ್ರಿ ಟ್ವೀಟ್ ಮಾಡಿರುವ ಶಿಂಧೆ, 'ಸಂವಿಧಾನದ 10ನೇ ವಿಧಿಪ್ರಕಾರ ಪಕ್ಷದ ವಿಪ್ ಅನ್ನು ಸದನದ ಕಲಾಪಗಳಿಗೆ ನೀಡಲಾಗುತ್ತದೆಯೇ ಹೊರತು ಪಕ್ಷದ ಸಭೆಗೆ ಹಾಜರಾಗಲು ಅಲ್ಲ' ಎಂದು ಹೇಳಿದ್ದಾರೆ.

'ಈ ವಿಷಯದಲ್ಲಿ ಸುಪ್ರೀಂ ಕೋರ್ಟ್‌ನ ಹಲವಾರು ತೀರ್ಪುಗಳಿವೆ. ನೀವು ಯಾರನ್ನು ಹೆದರಿಸಲು ಪ್ರಯತ್ನಿಸುತ್ತಿದ್ದೀರಿ ? ನಿಮ್ಮ ರಾಜಕೀಯ ಮತ್ತು ಕಾನೂನನ್ನು ನಾವು ಅರ್ಥಮಾಡಿಕೊಂಡಿದ್ದೇವೆ' ಎಂದು ತಿರುಗೇಟು ನೀಡಿದರು.

'ನಮ್ಮ 12 ಮಂದಿ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಏಕೆಂದರೆ ನಾವು ಬಾಳಾ ಸಾಹೇಬ್ ಠಾಕ್ರೆ ಅವರಿಗೆ ನಿಷ್ಠರಾಗಿದ್ದೇವೆ. ನಾವೇ ನಿಜವಾದ ಶಿವಸೇನಾ ಹಾಗೂ ಶಿವಸೈನಿಕರು. ಸಂಖ್ಯೆ ಬಲವಿಲ್ಲದೆ ಗುಂಪು ರಚಿಸಿದ್ದಕ್ಕಾಗಿ ನಾವೇ ನಿಮ್ಮ ವಿರುದ್ಧ ಕ್ರಮಕ್ಕೆ ಒತ್ತಾಯಿಸುತ್ತೇವೆ' ಎಂದು ಹೇಳಿದರು.

ಬುಧವಾರ ನಡೆದ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗದ ಬಂಡಾಯ ಪಾಳಯದ 12 ಶಾಸಕರನ್ನು ಅರ್ಹಗೊಳಿಸುವಂತೆ ಠಾಕ್ರೆ ನೇತೃತ್ವದ ಶಿವಸೇನಾ ಕೋರಿದೆ.

ಗುವಾಹಟಿಯಲ್ಲಿ ಬೀಡುಬಿಟ್ಟಿರುವ ಬಂಡಾಯ ಗುಂಪಿನಲ್ಲಿ ಶಿವಸೇನಾದ 37 ಶಾಸಕರು ಹಾಗೂ 10 ಪಕ್ಷೇತರರು ಇದ್ದಾರೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.