ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ಅಸ್ಥಿರಗೊಳಿಸಲು ಯತ್ನಿಸುವವರಿಗೆ ರಾಜ್ಯಪಾಲರು ಛೀಮಾರಿ ಹಾಕಬೇಕು ಎಂದು ಶಿವಸೇನಾ ಒತ್ತಾಯಿಸಿದೆ.
ಶಿವಸೇನಾ ಮುಖವಾಣಿ ’ಸಾಮ್ನಾ‘ದಲ್ಲಿ ಈ ಬಗ್ಗೆ ಸಂಪಾದಕೀಯ ಬರೆಯಲಾಗಿದ್ದು, ವಿರೋಧ ಪಕ್ಷ ಬಿಜೆಪಿ ವಿರುದ್ಧ ಕಿಡಿಕಾರಿದೆ.
ಮಹಾ ವಿಕಾಸ ಆಘಾಡಿ (ಎಂವಿಎ) ಸರ್ಕಾರಕ್ಕೆ ಸ್ಪಷ್ಟ ಬಹುಮತ ಇದೆ. ವಿರೋಧ ಪಕ್ಷವಾದ ಬಿಜೆಪಿಯಲ್ಲಿ 105 ಶಾಸಕರಿದ್ದಾರೆ. ಎಲ್ಲ 105 ಶಾಸಕರು ಒಗ್ಗಟ್ಟಿನಿಂದ ಇರಬೇಕು ಎನ್ನುವುದು ನಮ್ಮ ಬಯಕೆ. ಸರ್ಕಾರಕ್ಕೆ 170 ಶಾಸಕರ ಬೆಂಬಲ ಇದೆ. ಆದರೆ, ಇದು 200ಕ್ಕೆ ಹೆಚ್ಚಿದರೆ ಸರ್ಕಾರವನ್ನು ಬಿಜೆಪಿ ನಿಂದಿಸಬಾರದು ಎಂದು ಸಂಪಾದಕೀಯದಲ್ಲಿ ಪ್ರಸ್ತಾಪಿಸಲಾಗಿದೆ.
ರಾಜ್ಯಪಾಲ ಬಿ.ಎಸ್. ಕೋಶ್ಯಾರಿ ಅವರು ನೇರ ನಡೆ ನುಡಿಯ ವ್ಯಕ್ತಿತ್ವ ಹೊಂದಿದ್ದು, ಅವರೊಬ್ಬ ‘ಸಂತ–ಮಹಾತ್ಮ’ ಎಂದು ಬಣ್ಣಿಸಲಾಗಿದೆ. ಆರ್ಎಸ್ಎಸ್ ಸಿದ್ಧಾಂತವನ್ನು ಜೀವನದುದ್ದಕ್ಕೂ ಅನುಸರಿಸಿಕೊಂಡು ಬಂದಿದ್ದಾರೆ. ಯಾವುದೇ ಸಂತ–ಮಹಾತ್ಮ ರಾಜಕೀಯ ಸಂಚು ರೂಪಿಸುವಲ್ಲಿ ಪಾಲ್ಗೊಳ್ಳುವುದಿಲ್ಲ ಎನ್ನುವ ನಂಬಿಕೆ ಇದೆ. ಹೀಗಾಗಿ, ರಾಜ್ಯಪಾಲರು ತಮ್ಮ ಅಧಿಕಾರ ಚಲಾಯಿಸಿ ಸರ್ಕಾರ ಅಸ್ಥಿರಗೊಳಿಸಲು ಯತ್ನಿಸುತ್ತಿರುವವರನ್ನು ಕರೆಯಿಸಿಕೊಂಡು ಬುದ್ಧಿ ಹೇಳಬೇಕು ಎಂದು ಆಗ್ರಹಿಸಲಾಗಿದೆ.
ಮಹಾರಾಷ್ಟ್ರದಲ್ಲಿ ರಾಜ್ಯಪಾಲರ ಆಡಳಿತ ಹೇರಬೇಕು ಎಂದು ಪ್ರತಿನಿತ್ಯ ಒತ್ತಾಯ ಮಾಡಲಾಗುತ್ತಿದೆ. ಆದರೆ, ಮಹಾರಾಷ್ಟ್ರ ಬದಲು ಗುಜರಾತ್ನಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ಬಿಜೆಪಿ ಮೊದಲು ಒತ್ತಾಯಿಸಲಿ ಎಂದು ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.