ಜೈರಾಮ್ ರಮೇಶ್– ಪಿಟಿಐ ಚಿತ್ರ
ನವದೆಹಲಿ (ಪಿಟಿಐ): ಮಹಾರಾಷ್ಟ್ರದ ಮಹಾಯುತಿ ಸರ್ಕಾರವು ಅರಣ್ಯ ಹಕ್ಕು ಕಾಯ್ದೆಯ (ಎಫ್ಆರ್ಎ) ಅನುಷ್ಠಾನಕ್ಕೆ ಅಡ್ಡಿಯಾಗಿದ್ದು, ಲಕ್ಷಾಂತರ ಆದಿವಾಸಿಗಳಿಗೆ ಸಿಗಬೇಕಿದ್ದ ಸೌಲಭ್ಯಗಳನ್ನು ಕಸಿದುಕೊಂಡಿದೆ ಎಂದು ಕಾಂಗ್ರೆಸ್ ಗುರುವಾರ ಆರೋಪಿಸಿದೆ.
ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಈ ವರ್ಷದ ಆರಂಭದಲ್ಲಿ ಘೋಷಿಸಿರುವ ಆದಿವಾಸಿ ಸಂಕಲ್ಪದಲ್ಲಿ ಅರಣ್ಯ ಹಕ್ಕು ಕಾಯ್ದೆಯ ಅನುಷ್ಠಾನವೇ ಪ್ರಮುಖ ಆದ್ಯತೆ ಆಗಿದೆ ಎಂದು ಅದು ಪ್ರತಿಪಾದಿಸಿದೆ.
2006ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವು ಕ್ರಾಂತಿಕಾರಿ ಅರಣ್ಯ ಹಕ್ಕು ಕಾಯ್ದೆ ಜಾರಿಗೊಳಿಸಿತು. ಇದು ಆದಿವಾಸಿಗಳು ಮತ್ತು ಅರಣ್ಯವಾಸಿಗಳು ಹಾಗೂ ಮತ್ತು ಸಮುದಾಯಗಳಿಗೆ ಅರಣ್ಯಗಳನ್ನು ನಿರ್ವಹಿಸುವ ಮತ್ತು ಅವರು ಸಂಗ್ರಹಿಸುವ ಅರಣ್ಯ ಉತ್ಪನ್ನಗಳಿಂದ ಆರ್ಥಿಕ ಲಾಭ ಪಡೆಯುವ ಕಾನೂನು ಹಕ್ಕುಗಳನ್ನು ನೀಡಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ ಉಸ್ತುವಾರಿ) ಜೈರಾಮ್ ರಮೇಶ್ ಹೇಳಿದ್ದಾರೆ.
ಅರಣ್ಯವಾಸಿಗಳಿಗೆ ಎಫ್ಆರ್ಎ ವೈಯಕ್ತಿಕ ಮತ್ತು ಸಮುದಾಯದ ಹಕ್ಕುಗಳನ್ನು ಕೊಟ್ಟಿದೆ. 2011ರ ಏಪ್ರಿಲ್ನಲ್ಲಿ ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಮೆಂದಾ ಲೇಖಾ ಅರಣ್ಯ ಹಕ್ಕು ಸವಲತ್ತುಗಳನ್ನು ಪಡೆದುಕೊಂಡ ಮೊದಲ ಸಮುದಾಯವಾಯಿತು. ಬಿದಿರಿನ ಬಳಕೆಯ ಮೇಲೆ ಗ್ರಾಮ ಸಭೆಯು ನಿಯಂತ್ರಣ ಪಡೆಯಿತು ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಬಿಜೆಪಿ ಮತ್ತು ಮಹಾಯುತಿಯು ಎಫ್ಆರ್ಎ ಅನುಷ್ಠಾನಕ್ಕೆ ತಡೆಯೊಡ್ಡಿವೆ. ಲಕ್ಷಾಂತರ ಆದಿವಾಸಿಗಳು ಪ್ರಯೋಜನಗಳಿಂದ ವಂಚಿತವಾಗಿದ್ದಾರೆ’ ಎಂದು ರಮೇಶ್ ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.