ADVERTISEMENT

ಮಹಾರಾಷ್ಟ್ರದಲ್ಲಿ ಸ್ಫೋಟ: 13 ಮಂದಿ ಸಾವು

ಮಹಾರಾಷ್ಟ್ರದ ಧುಲೆ ಜಿಲ್ಲೆಯಲ್ಲಿ ದುರ್ಘಟನೆ

ಪಿಟಿಐ
Published 31 ಆಗಸ್ಟ್ 2019, 19:35 IST
Last Updated 31 ಆಗಸ್ಟ್ 2019, 19:35 IST
ಸ್ಫೋಟದ ತೀವ್ರತೆಗೆ ಆಕಾಶದೆತ್ತರಕ್ಕೆ ವ್ಯಾಪಿಸಿದ ಬೆಂಕಿ ಜ್ವಾಲೆ   –ಪಿಟಿಐ ಚಿತ್ರ 
ಸ್ಫೋಟದ ತೀವ್ರತೆಗೆ ಆಕಾಶದೆತ್ತರಕ್ಕೆ ವ್ಯಾಪಿಸಿದ ಬೆಂಕಿ ಜ್ವಾಲೆ   –ಪಿಟಿಐ ಚಿತ್ರ    

ಮುಂಬೈ: ರಾಸಾಯನಿಕ ಕಾರ್ಖಾನೆಯೊಳಗಿದ್ದ ಸಾರಜನಕ(ನೈಟ್ರೋಜನ್‌)ಅನಿಲ ಸಿಲಿಂಡರ್‌ಗಳ ಸರಣಿ ಸ್ಫೋಟದಿಂದಾಗಿ 13 ಕಾರ್ಮಿಕರು ಮೃತಪಟ್ಟು, 58 ಕಾರ್ಮಿಕರು ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಧುಲೆ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.

‘ಬೆಳಗ್ಗೆ 9.45ರ ವೇಳೆಗೆ ಶಿರ್‌ಪುರ್‌ ತಾಲೂಕಿನ ವಾಗಡಿ ಹಳ್ಳಿಯಲ್ಲಿರುವರುಮಿತ್‌ ಕೆಮಿಸಿಂಥ್‌ ಪ್ರೈ.ಲಿ.ಕಾರ್ಖಾನೆಯಲ್ಲಿ ಪೀಪಾಯಿಯಲ್ಲಿದ್ದ(ಬ್ಯಾರಲ್‌)ರಾಸಾಯನಿಕ ಸೋರಿಕೆಯಾಗಿ, ಬೆಂಕಿ ಕಾಣಿಸಿಕೊಂಡಿದೆ. ಇದೇ ಸಿಲಿಂಡರ್‌ಗಳ ಸ್ಫೋಟಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

‘ಘಟನೆ ಸಂಭವಿಸಿದ ವೇಳೆ ಕಾರ್ಖಾನೆಯೊಳಗೆ 100 ಕಾರ್ಮಿಕರಿದ್ದರು, ಸ್ಫೋಟದಿಂದಾಗಿ ವ್ಯಾಪಿಸಿದ್ದ ಬೆಂಕಿಯನ್ನು ನಂದಿಸಲಾಗಿದ್ದು, ಅಗ್ನಿಶಾಮಕ ದಳ, ಪೊಲೀಸ್‌ ಸಿಬ್ಬಂದಿ, ರಾಜ್ಯ ವಿಪತ್ತು ನಿರ್ವಹಣಾ ಪಡೆ(ಎಸ್‌ಡಿಆರ್‌ಎಫ್‌) ಸಿಬ್ಬಂದಿರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದಾರೆ’ ಎಂದರು. ಗಾಯಾಳುಗಳನ್ನು ಧುಲೆ ಸರ್ಕಾರಿ ಆಸ್ಪತ್ರೆ ಹಾಗೂ ಶಿರ್‌ಪುರ್‌ ಕಾಟೇಜ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ಮನೆಯಿಂದ ಹೊರಬಂದ ಜನ: ಔಷಧಿಗೆ ಬಳಸುವ ರಾಸಾಯನಿಕಗಳನ್ನು ತಯಾರಿಸುವ ಕಾರ್ಖಾನೆ ಇದಾಗಿದ್ದು, ಹೆಚ್ಚಿನ ಪ್ರಮಾಣದ ರಾಸಾಯನಿಕ ಮತ್ತು ನೈಟ್ರೋಜನ್‌ ಅನಿಲದ ಸಿಲಿಂಡರ್‌ ಶೇಖರಿಸಿಡಲಾಗಿತ್ತು. ಹೀಗಾಗಿ ಸ್ಫೋಟದ ತೀವ್ರತೆಯೂ ಅಧಿಕವಾಗಿತ್ತು.ಸ್ಫೋಟದ ಶಬ್ದಕ್ಕೆ ಬೆಚ್ಚಿಬಿದ್ದ ಕಾರ್ಖಾನೆ ವ್ಯಾಪ್ತಿಯ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.

₹5 ಲಕ್ಷ ಪರಿಹಾರ: ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಮೃತರ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.