ADVERTISEMENT

ಶಿರಡಿ: ₹500 ಕೋಟಿ ಸಾಲ ಪಡೆದ ಮಹಾರಾಷ್ಟ್ರ ಸರ್ಕಾರ

ಪಿಟಿಐ
Published 9 ಡಿಸೆಂಬರ್ 2018, 3:24 IST
Last Updated 9 ಡಿಸೆಂಬರ್ 2018, 3:24 IST
   

ಶಿರಡಿ: ಶಿರಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್‌ನಿಂದ (ಎಸ್‌ಎಸ್‌ಎಸ್‌ಟಿ) ಬಡ್ಡಿ ರಹಿತ ₹500 ಕೋಟಿ ಸಾಲ ಪಡೆಯಲು ಮಹಾರಾಷ್ಟ್ರ ಸರ್ಕಾರ ಒಪ್ಪಂದ ಮಾಡಿಕೊಂಡಿದೆ.

ಕಾಲುವೆಗಳನ್ನು ನಿರ್ಮಿಸಲು ಈ ಹಣ ಬಳಕೆ ಮಾಡುವುದಾಗಿ ಸರ್ಕಾರ ಸಮರ್ಥಿಸಿಕೊಂಡಿದೆ. ಸರ್ಕಾರದ ಈ ಕ್ರಮಕ್ಕೆ ನ್ಯಾಷನಲ್‌ ಕಾಂಗ್ರೆಸ್‌ ಪಕ್ಷ (ಎನ್‌ಸಿಪಿ) ಆಕ್ಷೇಪ ವ್ಯಕ್ತಪಡಿಸಿದೆ.

‘ರಾಜ್ಯ ಸರ್ಕಾರ ದಿವಾಳಿಯಾಗಿರುವುದಕ್ಕೆ ದೇವಸ್ಥಾನಗಳಿಂದ ಸಾಲ ಪಡೆದಿರುವುದೇ ಸಾಕ್ಷಿಯಾಗಿದೆ’ ಎಂದು ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕ ಧನಂಜಯ್‌ ಮುಂಡೆ ಟೀಕಿಸಿದ್ದಾರೆ.

ADVERTISEMENT

‘ಸಮೃದ್ಧಿ ಕಾರಿಡಾರ್‌ ಮತ್ತು ಬುಲೆಟ್‌ ರೈಲ್ವೆ ಯೋಜನೆಗಳಿಗೆ ಅಪಾರ ಹಣವಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಹಾಗಿದ್ದರೆ, ಈಗ ದೇವಾಲಯಗಳಿಂದ ಹಣ ಪಡೆಯುವ ಅಗತ್ಯವೇನಿತ್ತು’ ಎಂದು ಪ್ರಶ್ನಿಸಿದ್ದಾರೆ.

’ನೀರಾವರಿಗೆ ಮೀಸಲಿಟ್ಟಿದ್ದ ₹28 ಸಾವಿರ ಕೋಟಿಯನ್ನೇ ಬಳಸದ ರಾಜ್ಯ ಸರ್ಕಾರ ದೇವಾಲಯಗಳ ಹಣದ ಮೇಲೆ ಕಣ್ಣಿಟ್ಟಿದೆ. ಪ್ರಧಾನಿ ಮತ್ತು ಮುಖ್ಯಮಂತ್ರಿ ಅವರು ದೇವಸ್ಥಾನದ ಹಣವನ್ನು ಲೂಟಿ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ.

ಇತ್ತೀಚೆಗೆ, ಎಸ್‌ಎಸ್‌ಎಸ್‌ಟಿ ಮತ್ತು ಗೋದಾವರಿ–ಮರಾಠವಾಡಾ ನೀರಾವರಿ ಅಭಿವೃದ್ಧಿ ನಿಗಮ (ಜಿಎಂಐಡಿಸಿ) ₹500 ಕೋಟಿ ಸಾಲ ಪಡೆಯುವ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.