ನಾಸಿಕ್: ಅಂತರ್ಜಾತಿ ವಿವಾಹವಾದ ಮಹಿಳೆಯು ಜಾತಿ ಆಧಾರಿತವಾಗಿ ಲಭ್ಯವಿರುವ ಯಾವುದೇ ಸರ್ಕಾರಿ ಸೌಲಭ್ಯಗಳನ್ನು ಪಡೆಯದಂತೆ ಗ್ರಾಮದ ‘ಜಾಟ್ ಪಂಚಾಯತಿ’ ಒತ್ತಾಯಿಸಿ ಲಿಖಿತ ಪತ್ರದ ಮೇಲೆ ಸಹಿ ಪಡೆದಿರುವ ಘಟನೆ ಮಹಾರಾಷ್ಟ್ರ ನಾಸಿಕ್ನಲ್ಲಿ ನಡೆದಿದೆ.
ಪ್ರಕರಣ ಸಂಬಂಧ ಇಲ್ಲಿನ ರಾಯಂಬೆ ಗ್ರಾಮದ ಸರ್ಪಂಚ್ ಮತ್ತಿತರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಕಾಶ್ ಅಂಬೇಡ್ಕರ್ ನೇತೃತ್ವದ ವಂಚಿತ್ ಬಹುಜನ ಅಘಾಡಿ (ವಿಬಿಎ) ಆಗ್ರಹಿಸಿದೆ.ಗ್ರಾಮದ ಸರ್ಪಂಚ್ ತಮ್ಮ ಹಕ್ಕುಗಳನ್ನು ದುರ್ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದೆ.
ಏನಿದು ಘಟನೆ?
ನಾಸಿಕ್ ತಾಲ್ಲೂಕಿನ ವಾಲ್ವಿಹಿರ್ ಗ್ರಾಮದ ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳೆಯೊಬ್ಬರು ಇತ್ತೀಚೆಗೆ ಅಂತರ್ಜಾತಿ ವಿವಾಹವಾಗಿದ್ದರು. ಮೇ 5ರಂದು ಅದೇ ತಾಲ್ಲೂಕಿನಲ್ಲಿರುವ ಪತಿಯ ಊರುರಾಯಂಬೆಗೆ ಬಂದಿದ್ದರು. ಈ ವೇಳೆ ಮಹಿಳೆಯ ಸಮುದಾಯಕ್ಕೆ ಸೇರಿದ ವ್ಯಕ್ತಿಗಳು ಪಂಚಾಯತಿ ಸೇರಿಸಿದರು. ಅಲ್ಲಿ ಜಾತಿ ಆಧಾರಿತವಾಗಿ ಪರಿಶಿಷ್ಟ ಪಂಗಡಕ್ಕೆ ಸರ್ಕಾರದಿಂದ ಲಭ್ಯವಿರುವ ಯಾವುದೇ ಪ್ರಯೋಜನ ಪಡೆಯದಂತೆ ನವ ದಂಪತಿಗಳಿಂದ ಒತ್ತಾಯಪೂರ್ವಕವಾಗಿ ಲಿಖಿತ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದಾರೆ. ಬಳಿಕ ಪತ್ರದ ಮೇಲೆ ಸರ್ಪಂಚ್ ಮೊಹರು ಒತ್ತಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.