ನವದೆಹಲಿ: ಮಕ್ಕಳಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ಐಸಿಎಂಆರ್) ‘ಮಿಷನ್ ಶಕ್ತಿ’ ಎಂಬ ಹೊಸ ಯೋಜನೆಯನ್ನು ಆರಂಭಿಸಿದೆ.
ಈ ಯೋಜನೆಯಡಿ ಆರೋಗ್ಯ ರಕ್ಷಣೆಗಾಗಿ ಮಹಾತ್ಮ ಗಾಂಧಿ ಅವರು ಪಾಲಿಸುತ್ತಿದ್ದ ಶಿಸ್ತು, ಅವರ ಚಿಂತನೆಗಳು ಮತ್ತು ಒಳ್ಳೆಯ ಗುಣಗಳ ಬಗ್ಗೆ ಮಕ್ಕಳಿಗೆ ತಿಳಿವಳಿಕೆ ನೀಡಲಾಗುವುದು. ಒಂದರ್ಥದಲ್ಲಿ ಗಾಂಧೀಜಿಯನ್ನು ಉತ್ತಮ ಆರೋಗ್ಯದ ‘ಪ್ರಚಾರ ರಾಯಭಾರಿ’ಯ ರೀತಿಯಲ್ಲಿ ಬಳಸಿಕೊಂಡು ಮಕ್ಕಳಿಗೆ ತಿಳಿವಳಿಕೆ ನೀಡಲಾಗುವುದು. ಗಾಂಧೀಜಿಯ 150ನೇ ಜನ್ಮ ವರ್ಷಾಚರಣೆಯ ಸಂದರ್ಭದಲ್ಲಿ ಈ ಯೋಜನೆ ರೂಪಿಸಲಾಗಿದೆ.
‘ಉತ್ತಮ ಆರೋಗ್ಯಕ್ಕಾಗಿ ಗಾಂಧೀಜಿ ಅನುಸರಿಸುತ್ತಿದ್ದ ಮಾದರಿಗಳು ಇಂದಿಗೂ ಅನುಕರಣೀಯ. ಅವರ ಚಿಂತನೆಗಳನ್ನು ಜೀವಂತವಾಗಿರಿಸುವ ಉದ್ದೇಶದಿಂದ ವಿಜ್ಞಾನಿಗಳು ಮತ್ತು ಸಂಶೋಧಕರು ಶಾಲೆಗಳಲ್ಲಿ ಮಕ್ಕಳಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವರು’ ಎಂದು ಐಸಿಎಂಆರ್ ತಿಳಿಸಿದೆ.
‘ಜೀವನಶೈಲಿ ಬದಲಾವಣೆಯಿಂದ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಇಂದಿನ ದಿನಗಳಲ್ಲಿ, ಶಾಲಾ ದಿನಗಳಲ್ಲೇ ಗಾಂಧೀಜಿಯ ಸೂತ್ರಗಳನ್ನು ಪಾಲಿಸುವಂತೆ ಮಕ್ಕಳಿಗೆ ಪ್ರೇರಣೆ ನೀಡಬೇಕಿದೆ’ ಎಂದು ಯೋಜನೆಯ ಸಂಯೋಜಕ ರಜನಿಕಾಂತ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.