ನವದೆಹಲಿ:ಮಹಾತ್ಮ ಗಾಂಧಿ ಕಟ್ಟಾ ಸನಾತನಿ ಹಿಂದೂ ಆಗಿದ್ದರು. ಅವರು ತಮ್ಮ ನಂಬಿಕೆಯಲ್ಲಿ ಅಚಲರಾಗಿದ್ದು, ಇತರರ ನಂಬಿಕೆಗಳನ್ನೂಗೌರವಿಸುತ್ತಿದ್ದರುಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಸೋಮವಾರ ದೆಹಲಿಯ ಗಾಂಧಿ ಸ್ಮೃತಿ ಸ್ಮಾರಕಭವನದಲ್ಲಿ ಗಾಂಧಿ ಬಗ್ಗೆ ಇರುವ 'ಗಾಂಧಿ ಕೊ ಸಮಝ್ನೇ ಕಾ ಯಹೀ ಸಮಯ್' ಎಂಬ ಪುಸ್ತಕವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಭಾಗವತ್, ಗಾಂಧಿ ಕಟ್ಟಾ ಸನಾತನಿ ಹಿಂದೂ ಆಗಿದ್ದರಿಂದ ದೇವರನ್ನು ಪೂಜಿಸಲು ವಿವಿಧ ವಿಧಾನಗಳ ಬಗ್ಗೆ ತಾರತಮ್ಯ ಮಾಡುತ್ತಿರಲಿಲ್ಲ. ಹಾಗಾಗಿ ಅವರು ತಮ್ಮ ನಂಬಿಕೆಗೆ ಬದ್ಧರಾಗಿದ್ದು, ಇತರರ ನಂಬಿಕೆಗಳನ್ನೂ ಗೌರವಿಸುವಂತೆ ಹೇಳುತ್ತಿದ್ದರು ಎಂದಿದ್ದಾರೆ.
ಅವರ ಪರೀಕ್ಷೆಗಳು ಅಥವಾ ಚಳವಳಿಯು ಬೇರೆ ದಾರಿ ಹಿಡಿದರೆ ಅವರು ಪಶ್ಚಾತ್ತಾಪ ಪಡುತ್ತಿದ್ದರು. ಈಗಿನ ಕಾಲದಲ್ಲಿ ಚಳವಳಿಯಲ್ಲಿ ಏನಾದರೂ ಎಡವಟ್ಟಾದರೆ ಅಥವಾ ಕಾನೂನಿನ ತೊಡಕು ಎದುರಾದರೆ ಅದಕ್ಕೆ ಯಾರೂ ಪಶ್ಚಾತ್ತಾಪ ಪಡುವುದಿಲ್ಲ. ಸಾಮಾನ್ಯವಾಗಿ ಪ್ರತಿಭಟನೆಗೆ ನೇತೃತ್ವ ವಹಿಸಿದವರು ಇದಕ್ಕೆ ಬೆಲೆ ತೆರಬೇಕಾಗುತ್ತದೆ. ಆದರೆ ಚಳವಳಿಯ ಹಿಂದಿರುವವರಿಗೆ ಮಾತ್ರ ಗೆಲುವು ಅಥವಾ ಸೋಲಿನ ಪ್ರಶ್ನೆ ಇರುವುದು ಎಂದು ಭಾಗವತ್ ಹೇಳಿದ್ದಾರೆ.
ಗಾಂಧಿಯವರ ಆದರ್ಶಗಳು ಭಾರತೀಯವಾಗಿದ್ದು ಹಾಗಾಗಿ ಅವರೆಂದಿಗೂ ತಮ್ಮ ಹಿಂದೂ ರುಜುವಾತುಗಳನ್ನು ಮುಚ್ಚಿಡಲಿಲ್ಲ. ಭಾರತದ ಬಗ್ಗೆ ಗಾಂಧಿ ಅವರ ಕನಸುಗಳು ಈಗ ನನಸಾಗುತ್ತಿವೆ.
ಈಗಿನ ಯುವ ಜನಾಂಗ ಗಾಂಧಿ ಕನಸಿನ ಭಾರತಕ್ಕೆ ರೂಪ ನೀಡಲಿದೆ ಎಂಬ ಭರವಸೆ ನನಗಿದೆ. ಇಂದಿನಿಂದ 20 ವರ್ಷಗಳನಂತರ ಗಾಂಧಿ ಕನಸು ಕಂಡ ಭಾರತ ನಿರ್ಮಾಣವಾಗಿದೆ ಎಂದು ಹೇಳುವ ಸ್ಥಿತಿಯಲ್ಲಿ ನಾವಿರಬಹುದು ಎಂದು ಹೇಳಿದ ಭಾಗವತ್, ಗಾಂಧಿಯನ್ನು ಸಂತ ಎಂದು ಬಣ್ಣಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.