ADVERTISEMENT

ಕಂಗನಾ ರನೌತ್ 'ದ್ವೇಷದ ಏಜೆಂಟ್': ಮಹಾತ್ಮ ಗಾಂಧಿ ಮರಿ ಮೊಮ್ಮಗ ತುಷಾರ್ ಗಾಂಧಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ನವೆಂಬರ್ 2021, 16:15 IST
Last Updated 12 ನವೆಂಬರ್ 2021, 16:15 IST
ಬಾಲಿವುಡ್ ನಟಿ ಕಂಗನಾ ರನೌತ್
ಬಾಲಿವುಡ್ ನಟಿ ಕಂಗನಾ ರನೌತ್   

ಮುಂಬೈ: ಮಹಾತ್ಮ ಗಾಂಧಿ ಅವರ ಮರಿ ಮೊಮ್ಮಗ ತುಷಾರ್ ಗಾಂಧಿ ಅವರು ಬಾಲಿವುಡ್ ನಟಿ ಕಂಗನಾ ರನೌತ್ 'ದ್ವೇಷದ ಏಜೆಂಟ್' ಎಂದು ಕಿಡಿಕಾರಿದ್ದು, ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.

'ಪದ್ಮಶ್ರೀ ಪುರಸ್ಕೃತೆ ಕಂಗನಾ ರನೌತ್ ಅವರು ಧ್ವೇಷ, ಅಸಹಿಷ್ಣುತೆ ಮತ್ತು ಅವಿವೇಕದ ಪ್ರತಿನಿಧಿ ಆಗಿದ್ದಾರೆ. 2014ರಲ್ಲಿ ಭಾರತವು ಸ್ವಾತಂತ್ರ್ಯವನ್ನು ಪಡೆದಿದೆ ಎಂದು ಆಕೆಗೆ ಭಾಸವಾಗಿರುವುದರಲ್ಲಿ ಆಶ್ಚರ್ಯವೇ ಇಲ್ಲ. ಭಾರತದಲ್ಲಿ ದ್ವೇಷ, ಅಸಹಿಷ್ಣುತೆ, ಹುಸಿ ದೇಶಭಕ್ತಿ ಮತ್ತು ದಬ್ಬಾಳಿಕೆಗಳು 2014ರಿಂದೀಚೆಗೆ ಮುಕ್ತವಾದವು' ಎಂದುತುಷಾರ್ ಗಾಂಧಿ ಟ್ವೀಟ್ ಮಾಡಿದ್ದಾರೆ.

'2014ರಿಂದೀಚೆಗೆ ದ್ವೇಷದ ಪೂರೈಕೆದಾರರು ದ್ವೇಷವನ್ನು ಮುಕ್ತವಾಗಿ ಪ್ರಚಾರ ಮಾಡಲು ಅಧಿಕೃತವಾಗಿ ಒಪ್ಪಿಗೆಯನ್ನು ಪಡೆದಿದ್ದಾರೆ. ವಿಷಕಾರಿ ಸಿದ್ಧಾಂತಕ್ಕೆ ಅಧಿಕೃತ ಮಂಜೂರಾತಿ ಲಭ್ಯವಾದ ಬಳಿಕವೇ ಇದೆಲ್ಲ ಸಾಧ್ಯವಾಗುತ್ತದೆ. ದ್ವೇಷದ ಚಂದಾದಾರರು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವು ಮಹತ್ವದ್ದೆಂದು ಭಾವಿಸಿಲ್ಲದಿರುವುದು ಆಶ್ಚರ್ಯ ಉಂಟು ಮಾಡುವುದಿಲ್ಲ' ಎಂದು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುತ್ತಾ, ಪ್ರಧಾನಿ ಮೋದಿಯವರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿಯೇ ಇಂತಹ ಹೇಳಿಕೆಗಳು ಹೊರಬಂದಿರುವುದರಲ್ಲಿ ಆಶ್ಚರ್ಯ ಪಡುವಂತದ್ದೇನಿಲ್ಲ. ನಮ್ಮ ದೇಶದಲ್ಲಿ ಸದ್ಯ ಪ್ರಧಾನ ಮಂತ್ರಿ ಕಚೇರಿಯೇ ದ್ವೇಷದ ಚಿಲುಮೆಯಾಗಿ ಮಾರ್ಪಟ್ಟಿದ್ದು, ಅದು ಸತತವಾಗಿ ಹರಿಯುತ್ತಿದೆ' ಎಂದು ಟ್ವೀಟ್ ಮಾಡಿದ್ದಾರೆ.

‘ಭಾರತಕ್ಕೆ 2014ರಲ್ಲಿ ನಿಜವಾದ ಸ್ವಾತಂತ್ರ್ಯ ಸಿಕ್ಕಿದೆ. 1947ರಲ್ಲಿ ಸಿಕ್ಕಿದ್ದು ಭಿಕ್ಷೆ‘ ಎಂದು ಹೇಳಿಕೆ ನೀಡಿರುವ ಬಾಲಿವುಡ್‌ ನಟಿ ಕಂಗನಾ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ‘ಭಿಕ್ಷೆ ಬೇಡಿದವರಿಗೆ ಕ್ಷಮಾದಾನ ಸಿಕ್ಕಿದೆ. ಧೈರ್ಯದಿಂದ ಹೋರಾಡಿದ ವೀರರಿಗೆ ಸ್ವಾತಂತ್ರ್ಯ ದೊರೆತಿದೆ‘ ಎಂದು ತಿರುಗೇಟು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.