ನವದೆಹಲಿ: ಭಾರತ–ಚೀನಾ ಗಡಿಯಲ್ಲಿ ಉದ್ವಿಗ್ನಗೊಂಡಿರುವ ಪರಿಸ್ಥಿತಿಯನ್ನು ತಿಳಿಗೊಳಿಸುವ ಸಲುವಾಗಿ ಉಭಯ ದೇಶಗಳ ಮೇಜರ್ ಜನರಲ್ ಮಟ್ಟದ ಮಾತುಕತೆ ಆರಂಭವಾಗಿದೆ.
ಸೋಮವಾರ ರಾತ್ರಿ ಲಡಾಖ್ನ ಪೂರ್ವಭಾಗದ ಗಲ್ವಾನ್ ಕಣಿವೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಭಾರತದ ಸೇನಾಪಡೆಯ ಅಧಿಕಾರಿ ಮತ್ತು ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ. ಚೀನಾದ ಸೇನೆಗೂ ಹಾನಿಯಾಗಿದೆ ಎಂದು ಸೇನಾ ಮೂಲಗಳು ಹೇಳಿವೆ.
ನರವಾಣೆ ಪಠಾಣ್ಕೋಟ್ ಭೇಟಿ ರದ್ದು: ಚೀನಾ ಜತೆಗಿನ ಗಡಿ ಸಂಘರ್ಷ ಹೆಚ್ಚುತ್ತಿರುವ ಬೆನ್ನಲ್ಲೇ ಸೇನಾ ಮುಖ್ಯಸ್ಥ ಎಂ.ಎಂ.ನರವಾಣೆ ಅವರ ಪಠಾಣ್ಕೋಟ್ ಭೇಟಿ ರದ್ದಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಈ ಮಧ್ಯೆ,ವಿವಾದಿತ ಗಡಿ ಪ್ರದೇಶ ದಾಟಿ ಭಾರತೀಯ ಸೇನೆಯೇ ನಮ್ಮ ಸಿಬ್ಬಂದಿ ಮೇಲೆ ದಾಳಿ ನಡೆಸಿದೆ ಎಂದು ಚೀನಾ ಆರೋಪಿಸಿದೆ. ಭಾರತದ ಪಡೆಗಳು ಸೋಮವಾರ ರಾತ್ರಿ ಎರಡು ಬಾರಿ ಗಡಿ ದಾಟಿದ್ದವು. ನಮ್ಮ ಸೇನಾ ಪಡೆಗಳನ್ನು ಪ್ರಚೋದಿಸಿದ್ದಲ್ಲದೆ, ದಾಳಿ ಮಾಡಿದ್ದವು. ಪರಿಣಾಮವಾಗಿ ಚಕಮಕಿ ನಡೆದು ಎರಡೂ ದೇಶಗಳ ಯೋಧರಿಗೆ ಹಾನಿಯಾಗುವಂತಾಯಿತು ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯನ್ ಆರೋಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.