ADVERTISEMENT

ನನ್ನನ್ನು ಮುಖ್ಯಮಂತ್ರಿ ಮಾಡಿದ್ದು ಫಡಣವೀಸ್‌ ಮಾಸ್ಟರ್‌ಸ್ಟ್ರೋಕ್‌: ಏಕನಾಥ ಶಿಂಧೆ

ಪಿಟಿಐ
Published 1 ಜುಲೈ 2022, 6:24 IST
Last Updated 1 ಜುಲೈ 2022, 6:24 IST
ಮುಂಬೈನ ರಾಜಭವನದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಶಿವಸೇನಾ ನಾಯಕ ಏಕನಾಥ ಶಿಂಧೆ. ಪಿಟಿಐ ಚಿತ್ರ
ಮುಂಬೈನ ರಾಜಭವನದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಶಿವಸೇನಾ ನಾಯಕ ಏಕನಾಥ ಶಿಂಧೆ. ಪಿಟಿಐ ಚಿತ್ರ   

ಮುಂಬೈ: ನನ್ನನ್ನು ಮುಖ್ಯಮಂತ್ರಿ ಮಾಡಿದ್ದು ಬಿಜೆಪಿ ನಾಯಕ ದೇವೇಂದ್ರ ಫಡಣವೀಸ್‌ ಅವರ ಮಾಸ್ಟರ್‌ಸ್ಟ್ರೋಕ್‌ ಎಂದು ಏಕನಾಥ ಶಿಂಧೆ ಬಣ್ಣಿಸಿದ್ದಾರೆ.

'ಬಿಜೆಪಿ ಅಧಿಕಾರದ ವ್ಯಾಮೋಹ ಹೊಂದಿದೆ ಎಂದು ಜನರು ತಿಳಿದಿದ್ದರು. ಆದರೆ ನಿಜಕ್ಕೂ ಇದು ದೇವೇಂದ್ರ ಫಡಣವೀಸ್‌ ಅವರು ನೀಡಿದ ಮಾಸ್ಟರ್‌ಸ್ಟ್ರೋಕ್‌. ವಿಧಾನಸಭೆಯಲ್ಲಿ ಅತಿಹೆಚ್ಚು ಶಾಸಕರನ್ನು ಹೊಂದಿದ್ದರೂ ಬೇರೊಬ್ಬರಿಗೆ ಅಧಿಕಾರವನ್ನು ಹಸ್ತಾಂತರಿಸಲು ವಿಶಾಲ ಹೃದಯ ಹೊಂದಿರಬೇಕು' ಎಂದು ಶಿಂಧೆ ವ್ಯಾಖ್ಯಾನಿಸಿದ್ದಾರೆ.

ಫಡಣವೀಸ್‌ ಅವರ ಈ ನಿರ್ಧಾರದಿಂದ ರಾಜ್ಯದ ಮತ್ತು ರಾಷ್ಟ್ರದ ಜನತೆಗೆ ಹೃದಯ ವೈಶಾಲ್ಯದ ಹೊಸ ಉದಾಹರಣೆಯನ್ನು ಕಾಣುವಂತಾಯಿತು ಎಂದು ಮುಖ್ಯಮಂತ್ರಿಯಾಗಿ ತಮ್ಮನ್ನು ಆಯ್ಕೆ ಮಾಡಿದ ಬೆನ್ನಲ್ಲೇ ಹೇಳಿದ್ದರು. ಪ್ರಮಾಣವಚನ ಸ್ವೀಕರಿಸಿದ ಬಳಿಕವೂ, ಪಂಚಾಯಿತಿ, ಸ್ಥಳೀಯ ಸಂಸ್ಥೆ ಅಧ್ಯಕ್ಷ ಸ್ಥಾನವನ್ನೇ ಬಿಡದ ಕಾಲವಿದು. 120 ಶಾಸಕರ ಬಲ ಹೊಂದಿರುವವರು ಹೀಗೆ ಮಾಡಲು ಸಾಧ್ಯವೇ ಇಲ್ಲ ಎಂದು ಫಡಣವೀಸ್‌ ಅವರನ್ನು ಕೊಂಡಾಡಿದ್ದರು.

ADVERTISEMENT

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಅವರಿಗೆ ಧನ್ಯವಾದ ಹೇಳಿದರು.

ಹಿಂದಿನ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ನೇತೃತ್ವದ ಮಹಾ ವಿಕಾಸ ಆಘಾಡಿ ಸರ್ಕಾರದ ವಿರುದ್ಧ ಬಂಡಾಯವೆದ್ದು ನಲವತ್ತಕ್ಕೂ ಹೆಚ್ಚು ಶಾಸಕರೊಂದಿಗೆ ಕಳೆದ ವಾರ ಅಸ್ಸಾಂನ ಗುವಾಹಟಿಯ ಐಷಾರಾಮಿ ಹೋಟೆಲ್‌ ಸೇರಿಕೊಂಡಿದ್ದರು. ಒಂದು ವಾರ ನಡೆದ ರಾಜಕೀಯ ಡ್ರಾಮವು ಅಂತಿಮವಾಗಿ ಶಿಂಧೆ ಅವರೇ ನೂತನ ಮುಖ್ಯಮಂತ್ರಿಯಾಗುವುದರೊಂದಿಗೆ ಅಂತ್ಯವಾಗಿದೆ. ಶಿವಸೇನಾ ಶಾಸಕರ ಬಂಡಾಯದ ಹಿಂದೆ ತಮ್ಮ ಪಾತ್ರವಿಲ್ಲ ಎಂದೇ ಬಿಜೆಪಿ ಹೇಳಿಕೊಂಡು ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.