
ಕ್ವಾಲಾಲಂಪುರ: ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು ಭಾರತದಲ್ಲಿರುವ ನಮ್ಮ ನಿಮ್ಮೆಲ್ಲರಂತೆ ತಮಿಳಿನ ದಂತಕಥೆ ಎಂಜಿಆರ್ ಅವರ ದೊಡ್ಡ ಅಭಿಮಾನಿ ಎಂದು ಹೇಳಿದ್ದಾರೆ.
ಅಲ್ಲದೆ, ತಮಗಾಗಿ ಆಯೋಜಿಸಲಾಗಿದ್ದ ಭೋಜನಕೂಟದಲ್ಲಿ ತಮಿಳಿನ ‘ನಾಲೈ ನಮತೇ’ ಚಿತ್ರದ ಹಾಡನ್ನು ಉತ್ತಮವಾಗಿ ಹಾಡಿದರು ಎಂದು ಮೋದಿ ತಿಳಿಸಿದ್ದಾರೆ.
ಎಂಜಿಆರ್ ಎಂದು ಕರೆಯಲ್ಪಡುವ ದಿವಂಗತ ಮರುತೂರ್ ಗೋಪಾಲನ್ ರಾಮಚಂದ್ರನ್ ಅವರು, ತಮಿಳಿನ ಖ್ಯಾತ ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದರು. ತಮಿಳುನಾಡಿನ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಪಕ್ಷವನ್ನು ಸ್ಥಾಪಿಸಿದ್ದ ಅವರು, ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದರು..
1975ರಲ್ಲಿ ಬಿಡುಗಡೆಯಾದ 'ನಾಲೈ ನಮತೇ' ಎಂಜಿಆರ್ ಅವರ ಹಲವು ಬ್ಲಾಕ್ಬಸ್ಟರ್ ಚಿತ್ರಗಳಲ್ಲಿ ಒಂದಾಗಿದೆ.
‘ನನ್ನ ಸ್ನೇಹಿತ ಪ್ರಧಾನಿ ಅನ್ವರ್ ಇಬ್ರಾಹಿಂ ತಮಗಾಗಿ ಏರ್ಪಡಿಸಿದ್ದ ಭೋಜನದ ಸಮಯದಲ್ಲಿ ಎಂಜಿಆರ್ ನಟಿಸಿದ್ದ ‘ನಾಲೈ ನಮತೇ!’ ಚಿತ್ರದ ಹಾಡನ್ನು ಹಾಡಿದರು ಎಂದು ಪ್ರಧಾನಿ ಮೋದಿ ಎಕ್ಸ್ನಲ್ಲಿ ತಿಳಿಸಿದ್ದಾರೆ.
ಭಾರತದಲ್ಲಿರುವ ನಮ್ಮೆಲ್ಲರಂತೆ ಪ್ರಧಾನಿ ಅನ್ವರ್ ಇಬ್ರಾಹಿಂ ಕೂಡ ಎಂಜಿಆರ್ ಅವರ ದೊಡ್ಡ ಅಭಿಮಾನಿ! ಎಂದು ಮೋದಿ ಹೇಳಿದ್ದಾರೆ.
ಮಲೇಷ್ಯಾವು ವಿಶ್ವದಲ್ಲೇ ಅತಿಹೆಚ್ಚು ಭಾರತೀಯನ್ನು ಹೊಂದಿರುವ ಎರಡನೇ ದೇಶವಾಗಿದೆ. ಮಲೇಷ್ಯಾದಲ್ಲಿ ತಮಿಳರ ಸಂಖ್ಯೆ ಹೆಚ್ಚಿದೆ.
ಎರಡು ದಿನಗಳ ಮಲೇಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಕ್ವಾಲಾಲಂಪುರದಲ್ಲಿ ನಡೆದ ಸಮುದಾಯ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಮಲೇಷ್ಯಾದಲ್ಲಿರುವ ತಮಿಳು ವಲಸಿಗರು ವಿವಿಧ ಕ್ಷೇತ್ರಗಳಲ್ಲಿ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ತಮಿಳು ವಲಸಿಗರು ಹಲವು ಶತಮಾನಗಳಿಂದ ಮಲೇಷ್ಯಾದಲ್ಲಿದ್ದಾರೆ ಎಂದು ಹೇಳಿದರು.
ಈ ಇತಿಹಾಸದಿಂದ ಪ್ರೇರಿತವಾಗಿ, ಭಾರತವು ಮಲಯ ವಿಶ್ವವಿದ್ಯಾಲಯದಲ್ಲಿ ತಿರುವಳ್ಳುವರ್ ಪೀಠವನ್ನು ಸ್ಥಾಪಿಸಿದೆ. ಪರಂಪರೆಯನ್ನು ಮತ್ತಷ್ಟು ಬಲಪಡಿಸಲು ತಿರುವಳ್ಳುವರ್ ಕೇಂದ್ರವನ್ನು ಸ್ಥಾಪಿಸಲಿದೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.