ADVERTISEMENT

ಹುತಾತ್ಮ ಯೋಧರ ಹೆಸರಲ್ಲಿ ರಾಜಕೀಯ ಮಾಡಲು ನಾಚಿಕೆಯಾಗಲ್ವಾ?: ಮೋದಿಗೆ ಮಮತಾ ಪ್ರಶ್ನೆ

ಪಿಟಿಐ
Published 6 ಮಾರ್ಚ್ 2019, 14:48 IST
Last Updated 6 ಮಾರ್ಚ್ 2019, 14:48 IST
   

ಹೌರಾ: ಹುತಾತ್ಮ ಯೋಧರ ಹೆಸರಲ್ಲಿ ನರೇಂದ್ರ ಮೋದಿ ರಾಜಕೀಯ ಮಾಡುತ್ತಿದ್ದಾರೆ.ಅವರೊಬ್ಬರೇ ದೇಶಭಕ್ತ ಎಂಬಂತೆ ನಾಟಕವಾಡುತ್ತಿದ್ದಾರೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೋದಿ ವಿರುದ್ಧ ಗುಡುಗಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಮೋದಿ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಹೇಳಿದ ಮಮತಾ, ಸೂಚನಾಫಲಕಗಳಲ್ಲಿಯೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ನರೇಂದ್ರ ಮೋದಿಯವರ ಹೆಸರು ಇರದಂತೆ ನೋಡಿಕೊಳ್ಳಬೇಕು. ಕಳೆದ ಐದು ವರ್ಷಗಳಲ್ಲಿ ಮೋದಿ ಏನೂ ಮಾಡಿಲ್ಲ.ಹಾಗಾಗಿ ಅವರ ಕ್ಷಿಪಣಿ, ಬಾಂಬ್ ಮತ್ತು ಹುತಾತ್ಮ ಯೋಧರ ಮೃತದೇಹಗಳನ್ನು ತೋರಿಸುತ್ತಿದ್ದಾರೆ.ಹುತಾತ್ಮ ಯೋಧರ ಮೃತದೇಹ ತೋರಿಸಿ ಅವಕಾಶವಾದದ ರಾಜಕಾರಣ ಮಾಡಲು ನಿಮಗೆ ನಾಚಿಕೆಯಾಗುತ್ತಿಲ್ಲವೇ? ನಾವೆಲ್ಲರೂ ನಮ್ಮ ದೇಶ ಮತ್ತು ಸಶಸ್ತ್ರ ಪಡೆಗೆ ಬೆಂಬಲವಾಗಿ ನಿಂತಿದ್ದೇವೆ. ಆದರೆ ಮೋದಿ ಸರ್ಕಾರಕ್ಕೆ ಅಲ್ಲ.
ನಾವೆಲ್ಲರೂ ಪಕ್ಕದ ದೇಶದವರು ಮೋದಿ ಒಬ್ಬರೇ ಭಾರತೀಯರು ಎಂಬಂತೆ ಅವರಾಡಿಕೊಳ್ಳುತ್ತಾರೆ. ಬಾಲಾಕೋಟ್‍ನಲ್ಲಿ ವಾಯುಪಡೆ ನಡೆಸಿದ ವಾಯುದಾಳಿ ಬಗ್ಗೆ ಸರ್ಕಾರವನ್ನ ಪ್ರಶ್ನಿಸಿದರೆ ಅವರನ್ನು ಪಾಕಿಸ್ತಾನಿ ಎಂದು ಕರೆಯುತ್ತಾರೆ.

ದೇಶಭಕ್ತಿ ಬಗ್ಗೆ ಪಾಠ ಮಾಡುವುದನ್ನು ಬಿಜೆಪಿ ನಿಲ್ಲಿಸಲಿ.ಅವರಿಂದ ನಾವುಕಲಿಯಬೇಕಾದುದು ಏನೂ ಇಲ್ಲ.

ಬಿಜೆಪಿ ನಾಯಕರು ಪ್ರತಿದಿನ ವೆಬ್‍ಸೈಟ್‍ನಲ್ಲಿ ನನ್ನ ಧರ್ಮ ಯಾವುದು ಎಂದು ಹುಡುಕುತ್ತಿದ್ದಾರೆ. ಮಾನವೀಯತೆಯೇ ನನ್ನ ಧರ್ಮ. ಬಿಜೆಪಿಯವರ ಕೈ ರಕ್ತದಲ್ಲಿ ಮುಳುಗಿರುವುದರಿಂದ ಅವರಿಗೆ ಮಾನವೀಯತೆ ಏನೆಂಬುದು ಅರ್ಥವಾಗವುದಿಲ್ಲ ಎಂದು ಹೌರಾ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮಮತಾ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.