ಕೋಲ್ಕತ್ತ: ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಬೆಂಗಾಲಿ ಭಾಷೆ ಮಾತನಾಡುವ ಜನರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಕೋಲ್ಕತ್ತದಲ್ಲಿ ಬುಧವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.
ಬಳಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮಮತಾ, ‘ಪಶ್ಚಿಮ ಬಂಗಾಳದ ಸುಮಾರು 22 ಲಕ್ಷ ವಲಸೆ ಕಾರ್ಮಿಕರು ವಿವಿಧ ರಾಜ್ಯಗಳಲ್ಲಿದ್ದಾರೆ. ಇವರ ಬಳಿ ಆಧಾರ ಕಾರ್ಡ್, ಮತದಾರರ ಗುರುತಿನ ಚೀಟಿಸೇರಿ ಎಲ್ಲ ದಾಖಲೆಗಳಿವೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಬೆಂಗಾಲಿ ಮಾತನಾಡುವ ಇವರನ್ನು ರೋಹಿಂಗ್ಯ ಮುಸ್ಲಿಮರು ಎನ್ನಲಾಗುತ್ತಿದೆ. ಇದನ್ನು ಸಾಬೀತು ಮಾಡಿ’ ಎಂದು ಸವಾಲು ಹಾಕಿದರು.
‘ಬಂಗಾಳಿ ಜನರನ್ನು ಈ ರೀತಿಯಾಗಿ ಹಿಂಸಿಸಲು ಬಿಜೆಪಿಗೆ ಯಾವ ಅಧಿಕಾರವಿದೆ. ಬಂಗಾಳಿ ಜನರನ್ನು ಬಂಧಿಸುತ್ತೀರಿ, ಒತ್ತಾಯಪೂರ್ವಕವಾಗಿ ಬಾಂಗ್ಲಾದೇಶಕ್ಕೆ ಕಳುಹಿಸುತ್ತೀರಿ. ಹಾಗಾದರೆ, ಪಶ್ಚಿಮ ಬಂಗಾಳವು ಭಾರತದ ಭಾಗವಲ್ಲವೇ?’ ಎಂದರು.
‘ಸರಳವಾಗಿ ಹೇಳುತ್ತೇನೆ; ನಾವು ನಿಮ್ಮೊಂದಿಗೆ ದೈಹಿಕವಾಗಿ ಹೋರಾಟ ನಡೆಸುವುದಿಲ್ಲ. ಆದರೆ, ನೀವು ನಿಮ್ಮ ಈ ಹಿಂಸಾತ್ಮಕ ನೀತಿಯನ್ನು ತಕ್ಷಣದಲ್ಲಿಯೇ ನಿಲ್ಲಿಸಬೇಕು. ಇಲ್ಲದಿದ್ದರೆ, ಇದನ್ನು ಹೇಗೆ ನಿಲ್ಲಿಸಬೇಕು ಎಂದು ನಮಗೆ ತಿಳಿದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.