ಮಮತಾ ಬ್ಯಾನರ್ಜಿ
ಕೋಲ್ಕತ್ತ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಭಟನಾ ರ್ಯಾಲಿ ನಡೆಸಿದ್ದಾರೆ. ಕೋಲ್ಕತ್ತದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದಾರೆ.
ಸೋದರಳಿಯ, ಟಿಎಂಸಿಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಕೂಡ ಕಾಲ್ನಡಿಗೆಯಲ್ಲಿ ಭಾಗಿಯಾದರು. ರೆಡ್ ರಸ್ತೆಯಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಮೂರ್ತಿಯಿಂದ ಪ್ರಾರಂಭವಾದ 3.8 ಕಿ.ಮೀ ನಡಿಗೆ ರವೀಂದ್ರನಾಥ ಠಾಗೋರ್ ಅವರ ಪೂರ್ವಜರ ಮನೆಯಾಗಿರುವ ಜೊರಸಾಂಕೊದಲ್ಲಿ ಕೊನೆಗೊಂಡಿತು.
ಜಾಥದಲ್ಲಿ ಭಾಗಿಯಾಗಿದ್ದ ಟಿಎಂಸಿಯ ಸಾವಿರಾರು ಮಂದಿ ಕಾರ್ಯಕರ್ತರು ಬಾವುಟಗಳನ್ನು ಹಾರಿಸುತ್ತಾ, ಘೋಷಣೆಗಳನ್ನು ಕೂಗುತ್ತಾ, ಭಿತ್ತಿ ಪತ್ರಗಳನ್ನು ಹಿಡಿದುಕೊಂಡು ನಡೆದರು.
ಎಂದಿನಂತೆ ಬಿಳಿ ಕಾಟನ್ ಸೀರೆ ಹಾಗೂ ಚಪ್ಪಲಿ ಧರಿಸಿದ್ದ ಮಮತಾ ಬ್ಯಾನರ್ಜಿ ಜಾಥಾವನ್ನು ಮುನ್ನಡೆಸಿದರು. ಬದಿಯಲ್ಲಿ ನಿಂತಿದ್ದ ಅಭಿಮಾನಿಗಳ ಶುಭಾಶಯಗಳನ್ನು ಸ್ವೀಕರಿಸುತ್ತಾ ಮುಂದೆ ನಡೆದರು.
ಅವರ ಹಿಂದೆ ಟಿಎಂಸಿಯ ಶಾಸಕರು, ಸಂಸದರು ಹಾಗೂ ನಾಯಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.