ADVERTISEMENT

ತುಘಲಕ್ ಆಯೋಗ: ಚುನಾವಣಾ ಆಯೋಗದ ವಿರುದ್ಧ ಮಮತಾ ಟೀಕೆ

ಪಿಟಿಐ
Published 17 ಫೆಬ್ರುವರಿ 2026, 16:15 IST
Last Updated 17 ಫೆಬ್ರುವರಿ 2026, 16:15 IST
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ   

ಕೋಲ್ಕತ್ತ: ಚುನಾವಣಾ ಆಯೋಗವು ‘ತುಘಲಕ್‌ ಆಯೋಗ’ದಂತೆ ಕಾರ್ಯನಿರ್ವಹಿಸುತ್ತಿದೆ. ಬಿಜೆಪಿಯ ನಿರ್ದೇಶನದಂತೆ ಮತದಾರರ ಪಟ್ಟಿಯನ್ನು ತಿರುಚುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ  ಮಂಗಳವಾರ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಯೋಗವನ್ನು ದೆಹಲಿ ಸುಲ್ತಾನ ಮೊಹಮ್ಮದ್‌ ಬಿನ್‌ ತುಘಲಕ್ ಮತ್ತು ಅಡಾಲ್ಫ್‌ ಹಿಟ್ಲರ್‌ಗೆ ಹೋಲಿಕೆ ಮಾಡಿದರು. ‘ಆಯೋಗವು ಪಶ್ಚಿಮ ಬಂಗಾಳದ ಮತದಾರರರಿಗೆ ಚಿತ್ರಹಿಂಸೆ ನೀಡಿದೆ’ ಎಂದು ಹೇಳಿದರು.

‘ಸರ್ಕಾರವನ್ನು ಜನರು ಆಯ್ಕೆ ಮಾಡುತ್ತಾರೋ? ಅಥವಾ ರಾಜಕೀಯ ಪಕ್ಷವೊಂದರಿಂದ ಬೆಂಬಲಿತವಾಗಿರುವ ತುಘಲಕ್ ಆಯೋಗ ಮಾಡುತ್ತದೆಯೇ? ಹರಿಯಾಣ, ಬಿಹಾರ ಮತ್ತು ಮಹಾರಾಷ್ಟ್ರದಲ್ಲಿಯೂ ದೂರುಗಳಿವೆ. ಪಶ್ಚಿಮ ಬಂಗಾಳವನ್ನು ಯಾಕೆ ಗುರಿಯಾಗಿಸಲಾಗುತ್ತದೆ’ ಎಂದು ಪ್ರಶ್ನಿಸಿದರು.

ADVERTISEMENT

‘ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ(ಎಸ್‌ಐಆರ್‌)ಯಲ್ಲಿ ಬಿಹಾರದಂಥ ರಾಜ್ಯಗಳಲ್ಲಿ ಸ್ವೀಕೃತವಾದ ದಾಖಲೆಗಳನ್ನು ಬಂಗಾಳದಲ್ಲಿ ಯಾಕೆ ನಿರಾಕರಿಸಲಾಗುತ್ತಿದೆ? ಬಿಹಾರ ಭಾರತದ ಭಾಗವಲ್ಲವೇ ಅಥವಾ ಪಶ್ಚಿಮ ಬಂಗಾಳ  ಭಾರತದ ಭಾಗವಲ್ಲವೇ’ ಎಂದು ಪ್ರಶ್ನಿಸಿದರು.

‘ಆಯೋಗವು ನಿಯಮಗಳನ್ನು ಉಲ್ಲಂಘಿಸುತ್ತಿದೆ. ಸುಪ್ರೀಂ ಕೋರ್ಟ್‌ ನಿರ್ದೇಶನಗಳನ್ನು ಪಾಲಿಸುತ್ತಿಲ್ಲ ಮತ್ತು ಗೊಂದಲಗಳನ್ನು ಸೃಷ್ಟಿಸುತ್ತಿದೆ. ಇದರಿಂದಾಗಿ ಸಾವು ಸಂಭವಿಸಿದೆ’ ಎಂದು ಆರೋಪಿಸಿದರು.

ಐವರು ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

ಎಸ್‌ಐಆರ್‌ ಪ್ರಕ್ರಿಯೆ ವೇಳೆ ದತ್ತಾಂಶ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ ಮತ್ತು ಗಂಭೀರ ಲೋಪ ಎಸಗಿದ ಐವರು ನೌಕರರ ವಿರುದ್ಧ ಪಶ್ಚಿಮ ಬಂಗಾಳ ಸರ್ಕಾರ ಪ್ರಕರಣ ದಾಖಲಿಸಿಕೊಂಡಿದೆ. ಆರೋಪಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಚುನಾವಣಾ ಆಯೋಗ ನಿರ್ದೇಶನ ನೀಡಿದ ಆರು ತಿಂಗಳ ಬಳಿಕ ಸರ್ಕಾರ ಕ್ರಮಕೈಗೊಂಡಿದೆ. ಚುನಾವಣಾ ಆಯೋಗ ನಿಗದಿಪಡಿಸಿದ ಗಡುವು ಅಂತ್ಯಗೊಳ್ಳುವ ಒಂದು ಗಂಟೆ ಮುಂಚಿತವಾಗಿ ಪ್ರಕರಣ ದಾಖಲಾಗಿದೆ. ಆಯೋಗದ ಸೂಚನೆಯ ಬಳಿಕ ಸರ್ಕಾರವು ಐವರು ಅಧಿಕಾರಿಗಳನ್ನು ಅಮಾನತುಗೊಳಿಸಿತ್ತು ಆದರೆ ಪ್ರಕರಣ ದಾಖಲಿಸಿಕೊಂಡಿರಲಿಲ್ಲ. ‘ಅಧಿಕಾರಿಗಳೊಂದಿಗೆ ನಾವಿದ್ದೇವೆ. ಈ ಪ್ರಕರಣವನ್ನು ಗಂಭೀರವಾಗಿ ಪರಗಣಿಸಬೇಕಿಲ್ಲ’ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.