ADVERTISEMENT

ಬಿಜೆಪಿಯ ದಬ್ಬಾಳಿಕೆ ಆಡಳಿತದ ವಿರುದ್ಧ ಪ್ರಗತಿಪರ ಶಕ್ತಿಗಳು ಒಂದಾಗಬೇಕು: ಮಮತಾ ಕರೆ

ಪ್ರತಿಪಕ್ಷಗಳ ನಾಯಕರಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಪತ್ರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಮಾರ್ಚ್ 2022, 8:33 IST
Last Updated 29 ಮಾರ್ಚ್ 2022, 8:33 IST
ಮಮತಾ ಬ್ಯಾನರ್ಜಿ (ಪಿಟಿಐ ಸಂಗ್ರಹ ಚಿತ್ರ)
ಮಮತಾ ಬ್ಯಾನರ್ಜಿ (ಪಿಟಿಐ ಸಂಗ್ರಹ ಚಿತ್ರ)   

ಕೋಲ್ಕತ್ತ: ಕೇಂದ್ರದ ಸಂಸ್ಥೆಗಳನ್ನು ಬಳಸಿಕೊಂಡು ಬಿಜೆಪಿಯು ಪ್ರಜಾಪ್ರಭುತ್ವದ ಮೇಲೆ ನೇರ ದಾಳಿ ನಡೆಸುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಈ ವಿಚಾರವಾಗಿ ಎಲ್ಲ ಪ್ರತಿಪಕ್ಷಗಳ ನಾಯಕರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಅವರು ಪತ್ರ ಬರೆದಿದ್ದಾರೆ.

‘ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕೇಂದ್ರದ ಸಂಸ್ಥೆಗಳು ಕ್ರಮಕ್ಕೆ ಮುಂದಾಗುತ್ತವೆ’ ಎಂದು ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.

‘ಪ್ರತಿಯೊಬ್ಬರ ಅನುಕೂಲ ಮತ್ತು ಸೂಕ್ತವಾದ ಸಮಯ ನೋಡಿಕೊಂಡು ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲು ನಾವೆಲ್ಲ ಒಂದೆಡೆ ಜತೆಯಾಗಿ ಮಾತುಕತೆ ನಡೆಸಬೇಕೆಂದು ನಾನು ಒತ್ತಾಯಿಸುತ್ತೇನೆ’ ಎಂಬುದಾಗಿಯೂ ಅವರು ಪತ್ರದಲ್ಲಿ ಬರೆದಿದ್ದಾರೆ.

ಬಿಜೆಪಿಯ ದಬ್ಬಾಳಿಕೆಯ ಆಡಳಿತದ ವಿರುದ್ಧ ಎಲ್ಲ ಪ್ರಗತಿಪರ ಶಕ್ತಿಗಳು ಒಂದಾಗಬೇಕು ಎಂದು ಮಮತಾ ಕರೆ ನೀಡಿದ್ದಾರೆ.

‘ದೇಶದ ಸಾಂಸ್ಥಿಕ ಪ್ರಜಾಪ್ರಭುತ್ವದ ಮೇಲೆ ಬಿಜೆಪಿಯು ನಡೆಸುತ್ತಿರುವ ನೇರ ದಾಳಿಗಳ ಬಗ್ಗೆ ಕಳವಳ ಹೊಂದಿದ್ದು, ನಿಮಗೆ ಈ ಪತ್ರ ಬರೆದಿದ್ದೇನೆ. ನಮ್ಮ ದೇಶಕ್ಕೆ ಅಗತ್ಯವಿರುವ ಸರ್ಕಾರವನ್ನು ರೂಪಿಸುವಂತೆ ಮಾಡುವ ಸಲುವಾಗಿ ನಾವು ಒಗ್ಗಟ್ಟಾಗಿರುವ ಬದ್ಧತೆ ಪ್ರದರ್ಶಿಸಬೇಕಿದೆ’ ಎಂದು ಮಮತಾ ಹೇಳಿದ್ದಾರೆ.

ಮಾರ್ಚ್ 27ರಂದು ಈ ಪತ್ರ ಬರೆಯಲಾಗಿದ್ದು, ಅದನ್ನು ಮಂಗಳವಾರ ಬೆಳಿಗ್ಗೆ ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿದೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಅಧಿಕೃತ ಟ್ವಿಟರ್‌ಹ್ಯಾಂಡಲ್‌ನಲ್ಲಿಯೂ ಪ್ರಕಟಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.