ಕೋಲ್ಕತ್ತ: ಸುಭಾಸ್ ಚಂದ್ರ ಬೋಸ್ ಅವರ ಜನ್ಮದಿನಾಚರಣೆ ಅಂಗವಾಗಿ ಕೇಂದ್ರ ಸರ್ಕಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಷಣ ಮಾಡಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿರಾಕರಿಸಿದ್ದಾರೆ.
ಪ್ರಧಾನಿ ಮೋದಿ ಸಮ್ಮುಖದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಮಮತಾ ಅವರಿಗೆ ಭಾಷಣ ಮಾಡಲು ಆಹ್ವಾನಿಸಲಾಯಿತು. ಆ ಸಮಯದಲ್ಲಿ 'ಜೈ ಶ್ರೀರಾಮ್' ಎಂಬ ಘೋಷಣೆಗಳು ಕೇಳಿಬಂದವು. ಇದಕ್ಕೆ ಆಕ್ರೋಶಗೊಂಡ ಮಮತಾ, 'ಇದು ಯಾವುದೇ ರಾಜಕೀಯ ಕಾರ್ಯಕ್ರಮವಲ್ಲ. ಇದೊಂದು ಸರ್ಕಾರಿ ಕಾರ್ಯಕ್ರಮ. ಇದಕ್ಕೊಂದು ಘನತೆ ಇರಬೇಕು. ಆಹ್ವಾನಿಸುವುದು ಮತ್ತು ಅವಮಾನಿಸುವುದು ಯಾರಿಗೂ ಇಷ್ಟವಾಗುವುದಿಲ್ಲ. ನಾನು ಮಾತನಾಡುವುದಿಲ್ಲ. ಜೈ ಬಂಗಾಳ, ಜೈ ಹಿಂದ್' ಎಂದು ತಮ್ಮ ಭಾಷಣವನ್ನು ನಿಲ್ಲಿಸಿದ್ದಾರೆ.
ಬೋಸ್ ಅವರ 125ನೇ ಜಯಂತಿ ದಿನವಾದ ಇಂದು (ಜ.23) ಪ್ರಥಮ ‘ಪರಾಕ್ರಮ ದಿವಸ್’ ಕಾರ್ಯಕ್ರಮ ಕೋಲ್ಕತ್ತದಲ್ಲಿ ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದಾರೆ.
1897 ರಲ್ಲಿ ಈ ದಿನ ಜನಿಸಿದ ಬೋಸ್ ಅವರ ಜನ್ಮದಿನಾಚರಣೆಯ ನೆನಪಿಗಾಗಿ ಜನವರಿ 23 ಅನ್ನು 'ಪರಾಕ್ರಮ ದಿವಸ್' ಎಂದು ಆಚರಿಸಲು ಸರ್ಕಾರ ನಿರ್ಧರಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.