ಹೃಷಿಕೇಶ: ಕಳೆದ 55 ದಿನಗಳಿಂದ ಯಾರೊಬ್ಬರ ಮೇಲೆ ದಾಳಿ ನಡೆಸದ ಹಿನ್ನೆಲೆ ಹುಲಿಯನ್ನು 'ನರಭಕ್ಷಕ' ಹೆಸರಿನಿಂದ ಗುರುತಿಸುವುದನ್ನು ಅರಣ್ಯ ಇಲಾಖೆ ಕೈಬಿಟ್ಟಿದೆ. 3 ತಿಂಗಳ ಅವಧಿಯಲ್ಲಿ 6 ಮಂದಿಯನ್ನು ಕೊಂದಿದ್ದ ಹುಲಿಯನ್ನು 'ನರಭಕ್ಷಕ'ನೆಂದು ಘೋಷಿಸಲಾಗಿತ್ತು.
ಡಿಸೆಂಬರ್ 21 ಮತ್ತು ಮಾರ್ಚ್ 31ರ ನಡುವಿನ ಅವಧಿಯಲ್ಲಿ ಹುಲಿಯು ರಾಮ್ನಗರ್ ಅರಣ್ಯ ಪ್ರದೇಶದ ಫತೇಪುರ್ ವ್ಯಾಪ್ತಿಯ ಗ್ರಾಮವೊಂದರಲ್ಲಿ 6 ಮಂದಿಯನ್ನು ಕೊಂದಿತ್ತು.
'ಪನಿಯಾಲಿ, ದಮುವಾ ಧುಂಗಾ ಮತ್ತು ಬಜುರಿಯಾ ಹಲ್ದು ದಟ್ಟಾರಣ್ಯಗಳ ಒಳಗೆ ಹುಲಿ ದಾಳಿಗೆ ಆರು ಮಂದಿ ಗ್ರಾಮಸ್ಥರು ಜೀವ ಕಳೆದುಕೊಂಡಿದ್ದಾರೆ. ಆದರೆ ಹುಲಿಯು ಮನುಷ್ಯರು ವಾಸವಿರುವ ಪ್ರದೇಶಗಳಿಗೆ ನುಗ್ಗಿಲ್ಲ' ಎಂದು ಉತ್ತರಾಖಂಡದ ಅರಣ್ಯ ಪಡೆಯ ಮುಖ್ಯಸ್ಥ ವಿನೋದ್ ಕುಮಾರ್ ಸಿಂಘಾಲ್ ಹೇಳಿದ್ದಾರೆ.
ಪರಿಸ್ಥಿತಿಯನ್ನು ನಿರಾತಂಕಗೊಳಿಸಲು ಹಾಗೂ ಹುಲಿಯನ್ನು ಬಂಧಿಸಲು ಕಾರ್ಯಾಚರಣೆ ಮುಂದುವರಿದಿದೆ. 50 ಕ್ಯಾಮೆರಾಗಳ ಮೂಲಕ ಕಣ್ಗಾವಲು ಇರಿಸಲಾಗಿದೆ. 120 ಅರಣ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸುತ್ತಲಿನ 20 ಗ್ರಾಮಗಳ ಜನರಿಗೆ ತೀರ ಅನಿವಾರ್ಯದ ಸದಂರ್ಭಗಳನ್ನು ಹೊರತು ಪಡಿಸಿ, ಕಾಡಿಗೆ ಹೋಗದಿರಲು ಸೂಚಿಸಲಾಗಿದೆ ಎಂದು ಸಿಂಘಾಲ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.