ADVERTISEMENT

ಯಾವುದೇ ಥ್ರಿಲ್ಲರ್ ಸಿನಿಮಾಗೂ ಕಡಿಮೆ ಇಲ್ಲ ಈ ಸ್ಟೋರಿ! ಹಣಕ್ಕಾಗಿ ಸತ್ತಂತೆ ನಟಿಸಿದ

ಪಿಟಿಐ
Published 9 ಮೇ 2022, 7:12 IST
Last Updated 9 ಮೇ 2022, 7:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಛತ್ರಪುರ್: ಮಧ್ಯಪ್ರದೇಶದಲ್ಲಿ ನಡೆದ ಈ ಘಟನೆ ಯಾವುದೇ ಕ್ರೈಂ ಥ್ರಿಲ್ಲರ್ ಸಿನಿಮಾ ಕಥೆಗಳಿಗಿಂತ ಕಡಿಮೆ ಏನೂ ಇಲ್ಲ. ವ್ಯಕ್ತಿಯೊಬ್ಬ ತನ್ನ ಮಾಲೀಕನ ಸುಮಾರು ₹6 ಲಕ್ಷ ಹಣ ದೋಚಿ, ಸತ್ತಂತೆ ನಟಿಸಿ, ಇದೀಗ ಪೊಲೀಸ್ ಅಥಿತಿಯಾಗಿದ್ದಾನೆ.

ಕಳೆದ ವರ್ಷ ಜುಲೈ 16 ರಂದುಛತ್ರಪುರ್ ಜಿಲ್ಲೆಯ ಭಮಿತಾ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗುತ್ತದೆ. ಪ್ರಕರಣ ಏನೆಂದರೆ, ‘ಕಟ್ಟಡ ಕಾಮಗಾರಿಗಳ ಸರಕುಗಳನ್ನು ಮಾರಾಟ ಮಾಡುವ ಸುಧೀರ್ ಅಗರವಾಲ್ ಅವರು, ನನ್ನ ಬಳಿ ಕೆಲಸ ಮಾಡುತ್ತಿದ್ದ ನಾಮದೇವ್ ಎನ್ನುವ ವ್ಯಕ್ತಿ ರಾಜಗೀರ್ ಪಟ್ಟಣದಿಂದ ಬಿಲ್ ಸಂಗ್ರಹಿಸಿ ವಾಪಸ್ ಬರುವಾಗ ₹6.65 ಲಕ್ಷ ಹಣದೊಂದಿಗೆ ಕಾಣೆಯಾಗಿದ್ದಾನೆ’ ಎಂದು ದೂರು ದಾಖಲಿಸುತ್ತಾರೆ.

ದೂರು ದಾಖಲಿಸಿಕೊಂಡಭಮಿತಾ ಪೊಲೀಸ್ ಠಾಣೆಯ ಪೊಲೀಸರು ತನಿಖೆ ಕೈಗೊಳ್ಳುತ್ತಾರೆ. ಆದರೆ, ನಾಮದೇವ್ ಹಾಗೂ ಹಣದ ಬಗ್ಗೆ ಸುಳಿವು ಸಿಗುವುದಿಲ್ಲ.

ADVERTISEMENT

ಬಳಿಕ ಜುಲೈ 24 ರಂದು ಭಮಿತಾ ವ್ಯಾಪ್ತಿಯ ಪಾಳು ಕಟ್ಟಡವೊಂದರ ಬಳಿ ಸುಟ್ಟು ಕರಕಲಾದ ಶವ ಹಾಗೂ ಅರೆಬರೆ ಸುಟ್ಟ ಒಮಿನಿ ವಾಹನ ಸಿಗುತ್ತದೆ. ಪೊಲೀಸರು ಈ ಬಗ್ಗೆ ಪರಿಶೀಲಿಸಿ ಪತ್ರಿಕೆಗಳಲ್ಲಿ ಅನಾಮಧೇಯ ಶವ ಪತ್ತೆ ಎಂದು ನೋಟಿಸ್ ಕಳಿಸುತ್ತಾರೆ.

ನಂತರ ಶವ ಹುಡುಕಿಕೊಂಡು ಪೊಲೀಸರ ಬಳಿ ಬಂದ ನಾಮದೇವ ಕುಟುಂಬದವರು ಅದು ನಾಮದೇವನೇ ಎಂದು ಖಚಿತಪಡಿಸುತ್ತಾರೆಮತ್ತುಅವರೇ ಅಂತ್ಯಕ್ರಿಯೆ ನಡೆಸುತ್ತಾರೆ. ಆದರೆ, ನಾಮದೇವ ಬಳಿ ಇದ್ದ ಹಣ ಎಲ್ಲಿ ಹೋಯಿತು? ಎಂದು ಪೊಲೀಸರು ಚಿಂತಾಕ್ರಾಂತರಾಗುತ್ತಾರೆ. ಏಕೆಂದರೆ ಕಾರ್ ಬಳಿ ಹಣ ಸುಟ್ಟು ಹೋಗಿರುವ ಕುರುಹುಗಳು ಪೊಲೀಸರಿಗೆ ಕಾಣಿಸಿರುವುದಿಲ್ಲ.

ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿರುವಾಗ ಏತನ್ಮಧ್ಯೆಸುಧೀರ್ ಅಗರವಾಲ್ ಅವರಿಗೆ ಕಳೆದ ಮೇ 3 ರಂದು ಛತ್ರಪುರ್ ಜಿಲ್ಲೆಯ ಗಢಾ ತಿಗಡದ ಭಗೇಶ್ವರ್ ಮಂದಿರದಲ್ಲಿ ವ್ಯಕ್ತಿಯೊಬ್ಬ ವೇಷ ಮರಿಸಿಕೊಂಡು ಅಲೆದಾಡುತ್ತಿರುವುದು ಕಂಡು ಬರುತ್ತದೆ. ಆ ವ್ಯಕ್ತಿಯನ್ನು ನೋಡಿ ಅನುಮಾನಗೊಂಡ ಅಗರವಾಲ್, ಪೊಲೀಸರಿಗೆ ಮಾಹಿತಿ ನೀಡುತ್ತಾರೆ.

ಬಳಿಕ ಆ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದರೂ, ‘ತಾನು ಈ ಪ್ರಕರಣದಲ್ಲಿ ತಪ್ಪು ಮಾಡಿಲ್ಲ, ಅಮಾಯಕ, ನಾನೇ ಬೇರೆ, ನಾಮದೇವನೇ ಬೇರೆ’ ಎಂದು ಪೊಲೀಸರೊಂದಿಗೆ ವಾದ ಮಾಡುತ್ತಾನೆ. ಬಳಿಕ ಪಾಳು ಕಟ್ಟಡದಲ್ಲಿ ದೊರೆತಿದ್ದ ಶವದ ಡಿಎನ್‌ಎ ಪರೀಕ್ಷೆ ನಡೆಸಿ ಅಲ್ಲಿ ಸತ್ತಿದ್ದು ನಾಮದೇವ್ ಅಲ್ಲ ಎಂದು ಪೊಲೀಸರು ಖಚಿತಪಡಿಸಿಕೊಂಡಮೇಲೆ ನಾಮದೇವನ ಬಣ್ಣ ಬಯಲಾಗುತ್ತದೆ.

‘ಬಂಧಿತ ನಾಮದೇವನಿಂದ ₹5 ಲಕ್ಷ ಹಣ ವಶಪಡಿಸಿಕೊಂಡು ಪ್ರಕರಣದ ಬಗ್ಗೆ ವಿಸ್ತೃತ ತನಿಖೆ ನಡೆಸುತ್ತಿದ್ದೇವೆ. ನಾಮದೇವನೇ ಅಗರ್‌ವಾಲ್ ಅವರ ಹಣ ದೋಚಲು ಈ ಪ್ರಯತ್ನ ಮಾಡಿದ್ದ’ ಎಂದು ಭಮಿತಾ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಮನಮೋಹನ್ ಸಿಂಗ್ ಭಗೇಲ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.