ADVERTISEMENT

ಮದ್ಯ ಖರೀದಿಸಲು ಹಣ ಕೇಳಿದ್ದಕ್ಕೆ ಕೋಪಗೊಂಡು ವ್ಯಕ್ತಿಯೊಬ್ಬನ ಹತ್ಯೆ ಮಾಡಿದ ಐವರು!

ಪಿಟಿಐ
Published 4 ನವೆಂಬರ್ 2020, 11:22 IST
Last Updated 4 ನವೆಂಬರ್ 2020, 11:22 IST
ಪ್ರಾತನಿಧಿಕ ಚಿತ್ರ
ಪ್ರಾತನಿಧಿಕ ಚಿತ್ರ   

ನವದೆಹಲಿ: ಮದ್ಯ ಖರೀದಿಸಲು ಹಣ ಕೇಳಿದ್ದರಿಂದಾಗಿ ಕೋಪಗೊಂಡು ಲಜಪತ್ ನಗರದಲ್ಲಿ 23 ವರ್ಷದ ಯುವಕನನ್ನು ಐದು ಮಂದಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಆಗ್ನೇಯ ದೆಹಲಿಯ ಲಜಪತ್ ನಗರ 2 ರ ಉದ್ಯಾನದೊಳಗೆ ಮಂಗಳವಾರ ಸಂಜೆ ಅಕಿಫ್ ಎಂಬಾತ ಶವವಾಗಿ ಪತ್ತೆಯಾಗಿದ್ದಾನೆ. ಈತ ಈ ಹಿಂದೆ ದರೋಡೆ ಸೇರಿದಂತೆ ಕನಿಷ್ಠ ಎರಡು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿಸಿದ್ದಾರೆ.

ಮಂಗಳವಾರ ಸಂಜೆ ಲಜಪತ್ ನಗರ -2 ರ ಉದ್ಯಾನವನವೊಂದರ ಚರಂಡಿ ಬಳಿಯಲ್ಲಿ ಅಕಿಫ್, ಇತರ ಐವರೊಂದಿಗೆ ರಮ್ಮಿ ಆಡುತ್ತಿದ್ದಾಗ ಈ ಘಟನೆ ನಡೆದಿದೆ. ಸಂತ್ರಸ್ತನು ಮದ್ಯ ಖರೀದಿಸಲು ಹಣಕ್ಕಾಗಿ ಒತ್ತಾಯಿಸಿದ ಬಳಿಕ ಅವರ ನಡುವೆ ಜಗಳ ಉಂಟಾಗಿದೆ. ಬಳಿಕ ಅದು ವಿಕೋಪಕ್ಕೆ ತಿರುಗಿ ಅಕಿಫ್‌ ಮೇಲೆ ಗುದ್ದಲಿಯಿಂದ ಹಲ್ಲೆ ನಡೆಸಲಾಗಿದೆ. ನಂತರ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಸಂಜೆ 6 ಗಂಟೆ ಸುಮಾರಿಗೆ ವ್ಯಕ್ತಿಯೊಬ್ಬನ ಶವ ಲಜಪತ್ ನಗರದ ಉದ್ಯಾನದ ಬಳಿ ಬಿದ್ದಿರುವುದಾಗಿ ಕರೆ ಬಂತು. ಶವದ ಸಮೀಪದಲ್ಲೇ ರಕ್ತದ ಕಲೆಗಳಿದ್ದ ಗುದ್ದಲಿಯೂ ಇತ್ತು. ಬಳಿಕ ಆತ ನೆಹರು ನಗರದ ನಿವಾಸಿ ಅಕಿಫ್ ಎಂದು ತಿಳಿಯಿತು ಎಂದು ಉಪ ಪೊಲೀಸ್ ಆಯುಕ್ತೆ ಆರ್‌ಪಿ ಮೀನಾ ತಿಳಿಸಿದ್ದಾರೆ.

ಆರೋಪಿಗಳನ್ನು ರಾಕೇಶ್ (24), ರಾಹುಲ್(22), ಶ್ಯಾಂ(24), ಮುಕೇಶ್(24) ಮತ್ತು ಮಹೇಶ್(22) ಎಂದು ಗುರುತಿಸಲಾಗಿದ್ದು, ಎಲ್ಲರೂ ನೆಹರು ನಗರದ ಆದಿವಾಸಿ ಶಿಬಿರದವರು ಎಂದು ತಿಳಿದುಬಂದಿದೆ.

ರಮ್ಮಿ ಆಡುತ್ತಿದ್ದ ಐವರು ಮದ್ಯಕ್ಕಾಗಿ ತಲಾ 100 ಕೊಡುವಂತೆ ಅಕಿಫ್ ಕೇಳಿದ. ಇದು ಜಗಳಕ್ಕೆ ಕಾರಣವಾಯಿತು. ಮೊದಲಿಗೆ ಅಕಿಫ್‌ ರಾಕೇಶ್‌ಗೆ ಹೊಡೆದು ಉದ್ಯಾನದತ್ತ ತೆರಳಿದ. ಅಲ್ಲಿಂದ ಅವನನ್ನು ಹಿಂಬಾಲಿಸಿಕೊಂಡು ಹೋದಾಗ ಅಲ್ಲಿದ್ದ ಗುದ್ದಲಿಯಿಂದ ಮತ್ತೆ ಹಲ್ಲೆಗೆ ಯತ್ನಿಸಿದ. ನಂತರ ರಾಹುಲ್ ಮತ್ತು ರಾಕೇಶ್ ಆತನನ್ನು ಕೆಳಗೆ ತಳ್ಳಿ ಅದೇ ಗುದ್ದಲಿಯಿಂದ ಹಲ್ಲೆ ನಡೆಸಿದರು ಎಂದು ಆರೋಪಿಗಳು ಒಪ್ಪಿಕೊಂಡಿರುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.