ADVERTISEMENT

ತನ್ನೊಂದಿಗೆ ಮಾತು ನಿಲ್ಲಿಸಿದ್ದಕ್ಕೆ ಮಹಿಳೆಗೆ ಬೆಂಕಿ ಹಚ್ಚಿದ ಬಸ್ ಕಂಡಕ್ಟರ್‌

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 9:44 IST
Last Updated 22 ಫೆಬ್ರುವರಿ 2020, 9:44 IST
ಪ್ರಜಾವಾಣಿ
ಪ್ರಜಾವಾಣಿ   

ಕುಡಲೂರು: ಕಳೆದ ಕೆಲ ದಿನಗಳಿಂದ ತನ್ನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದಕ್ಕೆ ಕೋಪಗೊಂಡ ಖಾಸಗಿ ಬಸ್ ನಿರ್ವಾಹಕ 26 ವರ್ಷದ ತನ್ನ ಸ್ನೇಹಿತೆಗೆ ಬೆಂಕಿ ಹಚ್ಚಿರುವ ಘಟನೆ ತಮಿಳುನಾಡಿನ ವದಲೂರಿನಲ್ಲಿ ನಡೆದಿದ್ದು, ಶೇ 20ರಷ್ಟು ಸುಟ್ಟಗಾಯಗಳಿಂದ ಬಳಲುತ್ತಿರುವ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಂತ್ರಸ್ತೆಯನ್ನು ಜೆ ಸಲೊಮಿ ಎಂದು ಗುರುತಿಸಲಾಗಿದ್ದು, ಇಬ್ಬರು ಮಕ್ಕಳೊಂದಿಗೆ ನೈವೇಲಿಯಲ್ಲಿ ವಾಸಿಸುತ್ತಿದ್ದರು ಮತ್ತು ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರ ಪತಿ ಜಾನ್ ವಿಕ್ಟರ್ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಪ್ರತಿದಿನ ಕೆಲಸಕ್ಕೆ ಖಾಸಗಿ ಬಸ್‌ನಲ್ಲಿ ತೆರಳುವಾಗ ಅರಸೂರು ನಿವಾಸಿ ಬಸ್ ಕಂಡಕ್ಟರ್ ಸುಂದರಮೂರ್ತಿ ಎಂಬಾತನೊಂದಿಗೆ ಸ್ನೇಹ ಬೆಳೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸಲೋಮಿ ಆತನೊಂದಿಗೆ ಸ್ನೇಹದಿಂದಿದ್ದರು. ಈ ವೇಳೆ ಸಲುಗೆಯಿಂದಿದ್ದ ಮಹಿಳೆಯು ತನ್ನೊಂದಿಗೆ ಸಂಬಂಧ ಬೆಳೆಸಿದ್ದಾಳೆ ಎಂದು ಸುಂದರಮೂರ್ತಿ ತಪ್ಪಾಗಿ ಭಾವಿಸಿದ್ದ. ಈ ಕುರಿತು ವಿಷಯ ತಿಳಿದ ಮಹಿಳೆ ಆತನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದರು.

ADVERTISEMENT

ಮಾತುಬಿಟ್ಟಿದ್ದರಿಂದಾಗಿ ಬೇಸರಗೊಂಡಿದ್ದ ಸುಂದರಮೂರ್ತಿ ಆಕೆಯನ್ನು ಹಿಂಬಾಲಿಸಿ ಕಚೇರಿಗೆ ತೆರಳಿ ತನ್ನೊಂದಿಗೆ ಮಾತನಾಡುವಂತೆ ಮನವೊಲಿಸಲು ಪ್ರಯತ್ನಿಸಿದ್ದಾನೆ. ಆದರೆ ಅದು ವ್ಯರ್ಥವಾಗಿದೆ. ಮರುದಿನ ಮತ್ತೆ ಕಚೇರಿಗೆ ತೆರಳಿ ತನ್ನೊಂದಿಗೆ ಮಾತನಾಡುವಂತೆ ದುಂಬಾಲು ಬಿದ್ದಿದ್ದಾನೆ. ಆಕೆ ನಿರಾಕರಿಸಿದ್ದಕ್ಕೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೂಡಲೇ ಸ್ಥಳೀಯರು ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸುಂದರಮೂರ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.